ಕಲಬುರ್ಗಿ,ಅ,17: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾಗಿರುವ ಮತಕಳ್ಳತನ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್ಐಟಿ) ಚುರುಕುಗೊಳಿಸಿದ್ದು, ಕಲುಬುರ್ಗಿ ನಗರದ 5 ಮನೆಗಳ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರೋಜಾ ಬಡಾವಣೆಯ ಅಶ್ಪಕ್, ಜುಂಜುA ಕಾಲೋನಿಯ ನದೀಂ ಹಾಗೂ ಅಕ್ರಂ, ರಾಮನಗರ ಬಡಾವಣೆಯ ಅಸ್ಲಂ ಹಾಗೂ ಯಾದುಲ್ ಕಾಲೋನಿಯ ಮೊಹಮ್ಮದ ಜುನೈದ್ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದು, ದಾಳಿ ವೇಳೆ 7 ಲ್ಯಾಪ್ ಟಾಪ್, 15 ಮೊಬೈಲ್ ಸೇರಿದಂತೆ ಕೆಲ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ. ತಪಾಸಣೆಯ ವೇಳೆ ಸಾವಿರಾರು ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿವೆ.
ಏನಿದು ಮತಗಳ್ಳತನ?
2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ಸಹ ಕಾಂಗ್ರೆಸ್ಗೆ ಬರಬೇಕಾದ 6038 ಮತಗಳನ್ನೇ ಡಿಲಿಟ್ ಮಾಡಲು ಯತ್ನಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಬಿಜೆಪಿ ಪ್ಲ್ಯಾನ್ ಮಾಡಿರುವುದಾಗಿ ಸ್ವತಃ ರಾಹುಲ್ ಗಾಂಧಿ ಆರೋಪಿಸಿದ್ದರು, ರಾಜ್ಯ ಸರ್ಕಾರ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. 2023ರಲ್ಲಿ ಅಂದಿನ ಚುನಾವಣಾ ಅಧಿಕಾರಿಗಳು ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಪ್ರಕರಣವನ್ನು ಎಸ್ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದರು. ಅದಾದ ಬಳಿಕ ರಾಜ್ಯದಲ್ಲಿ ಎರಡು ಪಕ್ಷಗಳ ನಡುವೆ ಟಾಕ್ ಫೈಟ್ ಸಹ ನಡೆದಿತ್ತು. ಇದರ ಬೆನ್ನಲ್ಲೇ ನಿನ್ನೆ ಕಲಬುರಗಿ ನಗರದಲ್ಲಿ ಎಸ್ಐಟಿ ದಾಳಿ ಮಾಡಿದೆ.