
ಉಡುಪಿ,ಡಿ.20: ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿಯವರ ಒಡೆತನದ ರೆಸಾರ್ಟ್ನಲ್ಲಿ ವಿದೇಶಿ ವಲಸಿಗರು ಅಕ್ರಮವಾಗಿ ರೆಸಾರ್ಟ್ ನಲ್ಲಿ ಕೆಲಸಕ್ಕಿದ್ದು,ಇದು ಕಾನೂನು ಪ್ರಕಾರ ಅಪರಾಧ ಹಾಗೂ ದೇಶದ ಆಂತರಿಕ ಭದ್ರತೆಗೆ ಎಸಗಿದ ದ್ರೋಹವಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೋಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಪ್ರೇಮ ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರ ಅಸಲಿ ಬಣ್ಣ ಈಗ ಬಯಲಾಗಿದೆ. ನುಸುಳುಕೋರರ ಬಗ್ಗೆ ಮಾತನಾಡುವ ಬಿಜೆಪಿಗರು, ತಮ್ಮದೇ ಲಾಭಕ್ಕಾಗಿ ಅಕ್ರಮ ವಲಸಿಗರಿಗೆ ಉದ್ಯೋಗ ನೀಡಿರುವುದು ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ. ಸ್ವಾರ್ಥಕ್ಕೆ ಹಣ ಸಂಪಾದಿಸಲು ವಿದೇಶಿಗರನ್ನು ಬಳಸಿಕೊಳ್ಳುವುದು,ರಾಜಕೀಯ ಬಾಷಣ ಮಾಡಿ ಬೇರೆಯವರಿಗೆ ದೇಶಭಕ್ತಿಯ ಭೋದನೆ ಮಾಡುವುದು ಅವರ ಹಳೆಯ ಚಾಳಿ. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರ ಈ ನಡೆ ದೇಶದ ಭದ್ರತೆಗೆ ನೇರ ಸವಾಲಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಈ ಜಾಲದ ಹಿಂದೆ ಯಾರಿದ್ದಾರೆ ಮತ್ತು ಇವರಿಗೆ ರಾಜಕೀಯ ಕುಮ್ಮಕ್ಕು ಯಾರಿಂದ ಸಿಗುತ್ತಿದೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕೇವಲ ಕೆಲಸಗಾರರ ಮೇಲೆ ಕ್ರಮ ಕೈಗೊಂಡರೆ ಸಾಲದು, ಬಾಂಗ್ಲಾ ನುಸುಳುಕೊರರಿಗೆ ಮಮತಾ ಬ್ಯಾನರ್ಜಿ ಯವರು ಆಶ್ರಯ ಕೊಟ್ಟಿದ್ದಾರೆಂದು ಆರೋಪ ಮಾಡುವ ಬಿಜೆಪಿಗರು,ತಮ್ಮಲ್ಲಿಯೇ ಉದ್ಯೋಗಕ್ಕೆ ವಿದೇಶಿಯರನ್ನು ಇಟ್ಟು ಕೊಳ್ಳುತ್ತಾರೆ.
ವಿದೇಶಿಗರಿಗೆ ಆಶ್ರಯ ನೀಡಿದ ರೆಸಾರ್ಟ್ ಮಾಲೀಕ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಇತರ ಸಂದರ್ಭಗಳಲ್ಲಿ ಬೀದಿಗಿಳಿಯುವ ಬಿಜೆಪಿ ನಾಯಕರು, ಈಗ ತಮ್ಮದೇ ಪದಾಧಿಕಾರಿ ರಾಷ್ಟ್ರದ್ರೋಹಿ ಎನ್ನಬಹುದಾದ ಕೆಲಸದಲ್ಲಿ ಭಾಗಿಯಾಗಿರುವಾಗ ಮೌನಕ್ಕೆ ಶರಣಾಗಿರುವುದು ಏಕೆ? ಜಿಲ್ಲಾ ಬಿಜೆಪಿ ಘಟಕವು ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು.
ದೇಶದ ಭದ್ರತೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಈ ಪ್ರಕರಣವನ್ನು ನಾವು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುತ್ತೇವೆ. ತಪ್ಪಿತಸ್ಥ ಬಿಜೆಪಿ ನಾಯಕನ ವಿರುದ್ಧ ತಕ್ಷಣ ಕ್ರಮ ಜರುಗಿಸದಿದ್ದರೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಂಜುನಾಥ್ ಜೋಗಿ ಎಚ್ಚರಿಸಿದ್ದಾರೆ.
.
.
