
ಕಾರ್ಕಳ, ಜ.31: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ತಾಲೂಕಿನ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅದಾಲತ್ ನಡೆಸುವಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು, ಅಲ್ಲದೇ ಫೆಬ್ರವರಿ ತಿಂಗಳಾಂತ್ಯದೊಳಗೆ ಅದಾಲತ್ ಮುಗಿಸುವಂತೆ ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಸೂಚಿಸಿದರು.
ಅವರು ಜ.31 ರಂದು ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಮಟ್ಟದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಆಗಬೇಕಾದರೆ ಗ್ಯಾರಂಟಿ ಅದಾಲತ್ ನಡೆಯಬೇಕು. ಫಲಾನುಭವಿಗಳಲ್ಲಿ ಸಮಸ್ಯೆಗಳಿದ್ದರೆ ಗ್ರಾಮ ಪಂಚಾಯಿತಿ ಮಟ್ಟದ ಅದಾಲತ್ ನಲ್ಲಿ ಚರ್ಚಿಸಲು ಅವಕಾಶವಿದೆ.ಆದ್ದರಿಂದ ಸ್ಥಳೀಯ ಮಟ್ಟದಲ್ಲೇ ಏನೇ ಸಮಸ್ಯೆಗಳಿದ್ದರೂ ಬಗೆಹರಿಸಬಹುದಾಗಿದೆ ಎಂದರು.
ಗೃಹ ಲಕ್ಷ್ಮೀ ಪ್ರಗತಿ ಕುರಿತು ಸಿಡಿಪಿಓ ಶ್ರೀಲತಾ ಮಾಹಿತಿ ನೀಡಿ, ಅಕ್ಟೋಬರ್ ತಿಂಗಳವರೆಗೆ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ, ಆದರೆ ಜಿಎಸ್ಟಿ ಹಾಗೂ ಆದಾಯ ತೆರಿಗೆ ಫೈಲಿಂಗ್ ಕುರಿತ ತಾಂತ್ರಿಕ ತೊಂದರೆಗಳಿಂದ 474 ಅರ್ಜಿಗಳು ಬಾಕಿ ಉಳಿದಿವೆ ಎಂದರು.
ಮನೆ ಕಟ್ಟಲು ಬ್ಯಾಂಕುಗಳು ಸಾಲ ನೀಡಲು ಐಟಿ ರಿಟರ್ನ್ ಫೈಲ್ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಬಡವರು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ, ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅಜಿತ್ ಹೆಗ್ಡೆ ಹೇಳಿದರು.
ಯುವ ನಿಧಿ ಪ್ರಗತಿ ಕುರಿತು ಪ್ರಥ್ವಿರಾಜ್ ಮಾಹಿತಿ ನೀಡಿ, ಸೆಪ್ಟೆಂಬರ್ ತಿಂಗಳ ವರೆಗೆ 484 ಫಲಾನುಭವಿಗಳಿಗೆ ಹಣ ಪಾವತಿಯಾಗಿದೆ ಎಂದರು.

ಶಕ್ತಿ ಯೋಜನೆಯ ಕುರಿತು ಪ್ರಗತಿ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ ಅಜಿತ್ ಹೆಗ್ಡೆ, ಕಾರ್ಕಳ-ಪಳ್ಳಿ-ಕಣಂಜಾರು ಬಸ್ ರೂಟ್ ಗೆ ತಡೆಯಾಜ್ಞೆ ಇದ್ದರೂ ಅದರ ನಿವಾರಿಸುವ ನಿಟ್ಟಿನಲ್ಲಿ
ಕೆಎಸ್ಆರ್’ಟಿಸಿ ಅಧಿಕಾರಿಗಳು ನಿರಾಸಕ್ತಿ ತೋರಿಸುತ್ತಿರುವ ವಿರುದ್ಧ ಕಿಡಿಕಾರಿದರು.
ಸಭೆಯಲ್ಲಿ ತಾ.ಪಂ ಇಓ ಪ್ರಶಾಂತ ರಾವ್, ಸಮಿತಿ ಸದಸ್ಯರಾದ ಸಂತೋಷ್ ದೇವಾಡಿಗ, ಜಯ ಮೂಲ್ಯ, ಫಿಲಿಪ್ ಮಸ್ಕರೇನ್ಹಸ್,ಚರಿತ್ರ.ಎಂ, ಪ್ರಶಾಂತ ಪೂಜಾರಿ,ಸುರೇಶ್ ಆಚಾರ್ಯ, ವಿಶ್ವನಾಥ ಭಂಡಾರಿ, ಯತೀಶ್ ಕೋಟ್ಯಾನ್, ಶೋಭಾ ರಾಣೆ ಮುಂತಾದವರು ಉಪಸ್ಥಿತರಿದ್ದರು.


.
.
.
.
