ಕಾರ್ಕಳ: ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತಂಗಡಿ ಕಮಲಾಕ್ಷ ನಗರದಲ್ಲಿ ಅವಹೇಳನಕಾರಿಯಾಗಿ ಬರೆದು ವಿವಾದಾತ್ಮಕ ಪೋಸ್ಟರ್ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಬ್ಯಾನರ್ನಲ್ಲಿ ಹೆಸರು ಉಲ್ಲೇಖಿಸಿದ್ದ ಸ್ಥಳೀಯ ನಿವಾಸಿ ಸತೀಶ್ ದೇವಾಡಿಗ ಹಾಗೂ ಬ್ಯಾನರ್ ಮುದ್ರಿಸಿದ ಗ್ರಾಫಿಕ್ಸ್ ನ ಮಾಲಕಿ ಬಂಧಿತರು.
ನಿನ್ನೆ ಸಾಣೂರಿನ ಮುರತಂಗಡಿ ಕಮಲಾಕ್ಷ ನಗರದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಅವಹೇಳನಕಾರಿ ಬರಹಗಳೊಂದಿಗೆ ಬ್ಯಾನರ್ ಅಳವಡಿಸಲಾಗಿತ್ತು. ಹಿಂದೂ ಹೆಣ್ಣು ಮಕ್ಕಳ ತಂಟೆಗೆ, ಮೈ ಮುಟ್ಟಲು ಬಂದ ಪೊರ್ಕಿ ಮುಂಡು ಬ್ಯಾರಿಗಳೇ ಹುಷಾರ್! ಜಾಗ್ರತೆ ಎಂದು ಸತೀಶ್, ಒನ್ ಆಫ್ ದಿ ಫ್ರೀಡಂ ಫೈಟರ್ ಎಂಬ ಹೆಸರಿನಲ್ಲಿ ಬ್ಯಾನರ್ ಅಳವಡಿಸಲಾಗಿತ್ತು. ಅದರಲ್ಲಿ ಸತೀಶ್ ದೇವಾಡಿಗ ತನ್ನ ಹೆಸರು ಹಾಗೂ ತಾನು ಸ್ವಾತಂತ್ರ್ಯ ಹೋರಾಟಗಾರ ಎಂಬುದಾಗಿ ಬರೆದುಕೊಂಡಿದ್ದನು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿ ಪೊಲೀಸರು ಆರೋಪಿಗಳಾದ ಸತೀಶ್ ದೇವಾಡಿಗ ಹಾಗೂ ಬ್ಯಾನರ್ ಮುದ್ರಿಸಿದ ಗ್ರಾಫಿಕ್ಸ್ ನ ಮಾಲಕಿಯನ್ನು ಬಂಧಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇವರ ಪೈಕಿ ಸತೀಶ್ ದೇವಾಡಿಗನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದು, ಗ್ರಾಫಿಕ್ಸ್ ಮಾಲಕಿಯನ್ನು ಷರತ್ತು ಬದ್ಧ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.