ಕಾರ್ಕಳ: ಪರಶುರಾಮ ಥೀಂ ಪಾರ್ಕ್ ವಿಚಾರವಾಗಿ ಮೊದಲಿನಿಂದಲೂ ನಾವು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸುತ್ತ ಬಂದಿದ್ದೇವೆ. ತನಿಖೆಗೆ ಯಾವುದೆ ವಿರೋಧ, ಆಕ್ಷೇಪ ವ್ಯಕ್ತಪಡಿಸದೆ ಸಹಕರಿಸಿದ್ದೇವೆ. ಆದರೂ ಪ್ರಸ್ತುತ ರಾಜಕೀಯ ಪ್ರೇರಿತ ತನಿಖೆ ನಡೆಯುತ್ತಿದೆ. ಈ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಜಿ.ಪಂ ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಪಾರದರ್ಶಕ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಹೈಕೋರ್ಟ್ ತನಿಖೆಗೆ ಅಡ್ಡಿಪಡಿಸುವುದಿಲ್ಲ ಎಂದಿದೆ. ಅದರಂತೆ ತನಿಖೆ ನಡೆಯಲಿ, ಕೋರ್ಟ್ ಹೇಳಿಕೆಯಿಂದ ನಮ್ಮ ಆರಂಭದ ದಿನಗಳಿಂದ ಇದ್ದ ಆಗ್ರಹಕ್ಕೆ ಬಲ ಬಂದಿದೆ. ಸರಕಾರ ಈಗ ಮಾಡಬೇಕಿರುವುದು ಪ್ರಾಮಾಣಿಕ, ಪಾರದರ್ಶಕ ತನಿಖೆಯೇ ಹೊರತು ರಾಜಕಾರಣ ಪ್ರಾಯೋಜಿತ ತನಿಖೆಯಲ್ಲ. ಕಾಂಗ್ರೆಸ್ ಕಾರ್ಯಕರ್ತನ ದೂರಿನ ಅನ್ವಯ ಕಾಂಗ್ರೆಸ್ ನ ಕೈಗೊಂಬೆ ರೀತಿಯಲ್ಲಿ ಪೊಲೀಸರನ್ನು ಬೆದರಿಸಿ, ಗದರಿಸಿ ತನಿಖೆ ನಡೆಸುತ್ತಿರುವುದು ಅಕ್ಷಮ್ಯ ಅಪರಾಧ ಮತ್ತು ಇದಕ್ಕೆ ನಮ್ಮ ಸ್ಪಷ್ಟ ವಿರೋಧವಿದೆ ಎಂದಿದ್ದಾರೆ.
ಹೈಕೋರ್ಟ್ ಎತ್ತಿರುವ ಆಕ್ಷೇಪಗಳು ಥೀಂ ಪಾರ್ಕ್ ವಿರುದ್ಧ ಟೂಲ್ ಕಿಟ್ ರಾಜಕಾರಣ ನಡೆಸುತ್ತಿದ್ದವರಿಗೆ ಕಪಾಳ ಮೋಕ್ಷ ಮಾಡಿದಂತಿದೆ. ಪರಶುರಾಮನ ಪ್ರತಿಮೆ ಫೈಬರ್ ನಿಂದ ನಿರ್ಮಿಸಿದ್ದು ಎಂದು ಕಾರ್ಕಳ ಕಾಂಗ್ರೆಸ್ ಹೇಳಿತ್ತು. ಹೈಕೋರ್ಟ್ ಆದೇಶದಲ್ಲಿ ಇದು ಫೈಬರ್ ನಿಂದ ಮಾಡಿದ್ದು ಎಂಬ ಉಲ್ಲೇಖವಿಲ್ಲ. ಈ ಬಗ್ಗೆ ಎನ್ಐಟಿಕೆ ನೀಡಿದ ವರದಿಯನ್ನು ಕೋರ್ಟ್ ಉಲ್ಲೇಖಿಸಿದೆ. ಹೈಕೋರ್ಟ್ ಆದೇಶದಲ್ಲಿ ಕಾಂಗ್ರೆಸ್ ನ ಟೂಲ್ ಕಿಟ್ ಗ್ಯಾಂಗ್ ಶಾಸಕ ಸುನೀಲ್ ಕುಮಾರ್ ವಿರುದ್ಧ ಮಾಡುತ್ತಿದ್ದ ಆರೋಪಗಳ ಬಗ್ಗೆ ಒಂದಕ್ಷರವೂ ಉಲ್ಲೇಖವಿಲ್ಲ. ತೀರ್ಪಿನಲ್ಲಿ ಪ್ರತಿಮೆ ಹೊರತುಪಡಿಸಿ ಇತರ ಕಾಮಗಾರಿಗಳ ಬಗ್ಗೆ ಎಲ್ಲಿಯೂ ಆಕ್ಷೇಪವಿಲ್ಲ. ಥೀಂ ಪಾರ್ಕ್ ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳದವರಿಗೆ ಇನ್ನು ಸ್ಪಷ್ಟೀಕರಣಕೊಟ್ಟು ಪ್ರಯೋಜನವಿಲ್ಲ.
ಥೀಂ ಪಾರ್ಕ್ ಕಾಮಗಾರಿ ನಡೆಸಲು ಆದೇಶವಾದಗ ಕೆಲಸಕ್ಕೆ ಅಡ್ಡಿಪಡಿಸಲು ರಸ್ತೆಗೆ ಮಣ್ಣು ಹಾಕಿದವರು, ಮಹಜರು ನಡೆಸಿದವರು, ದೂರು ಕೊಟ್ಟವರು, ಹಣ ಬಿಡುಗಡೆಗೆ ತಡೆಯೊಡ್ಡುತ್ತಿರುವುದು ಎಲ್ಲವನ್ನು ಕಾಂಗ್ರೆಸ್ಸಿಗರೆ ಮಾಡಿದ ಮೇಲೆ ತನಿಖೆಯೂ ಕಾಂಗ್ರೆಸ್ ಕೃಪಾಪೋಷಿತವಾಗಿದೆ. ಕಾಂಗ್ರೆಸ್ಸಿಗೆ ಇದೊಂದು ಚಟ ರಾಜಕೀಯ ತೆವಲು. ಹತಾಶೆಯ ರಾಜಕಾರಣಕ್ಕೆ ಕಾರ್ಕಳದ ಅಭಿವೃದ್ದಿ , ಪ್ರವಾದೋದ್ಯಮವನ್ನು ಇಲ್ಲಿನ ನಾಯಕರು ಬಲಿ ಕೊಡುತ್ತಿದ್ದಾರೆ. ಕಾರ್ಕಳ ಕ್ಷೇತ್ರ ಸರ್ವ ರಂಗದಲ್ಲಿ ಬೆಳೆಯುವುದನ್ನು ಸಹಿಸದೆ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್ಸಿಗರು ತನಿಖೆಯಲ್ಲಿ ಹಸ್ತಕ್ಷೇಪ ನಡೆಸದೆ ಪಾರದರ್ಶಕ ತನಿಖೆ ನಡೆದು ಅತಿ ಶೀಘ್ರ ಪಾರ್ಕ್ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.