ವಿಜಯಪುರ :ರೈತರ ಸಾವಿರಾರು ಎಕರೆ ಭೂಮಿ ವಕ್ಫ್ ಇಲಾಖೆಗೆ ಸೇರಿದ್ದು ಎಂದು ಸರ್ಕಾರದಿಂದ ರೈತರಿಗೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಸಚಿವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದರು.ಇದೀಗ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ವಿರಕ್ತ ಮಠದ ಆಸ್ತಿ ಕೂಡ ವಕ್ಫ್ ಗೆ ಆಸ್ತಿಗೆ ಸೇರಿದೆ ಎಂದು ವಕ್ಫ್ ಬೋರ್ಡ್ ಹೇಳಿದೆ
ಸಿಂದಗಿ ಪಟ್ಟಣದ ವಿರಕ್ತ ಮಠದ ಆಸ್ತಿ ಇದೀಗ ವಕ್ಫ್ ಆಸ್ತಿಯಾಗಿದೆ. ಸರ್ವೆ ನಂ 1020 ರ ಅಸ್ತಿಯಲ್ಲಿ ಖಬರಸ್ಥಾನ ವಕ್ಫ್ ಬೋರ್ಡ್ ಎಂದು ನೋಂದಣಿಯಾಗಿದೆ.ಸಿದ್ದಲಿಂಗ ಸ್ವಾಮಿಜಿಗಳು ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ 11 ಖಾಲಿ ಇತ್ತು. 2018-19 ರಲ್ಲಿ ಖಾಲಿ ಇದ್ದ ಕಲಂ ನಲ್ಲಿ ವಕ್ಫ್ ಬೋರ್ಡ್ ಎಂದು ಸೇರ್ಪಡೆಯಾಗಿದೆ.
13ನೇ ಶತಮಾನದಲ್ಲಿ ಸ್ಥಾಪನೆಯಾಗಿರುವ ಮಠ ಖಬರಸ್ಥಾನ ವಕ್ಫ್ ಬೋರ್ಡ್ ಆಗಿದ್ದು ಹೇಗೆ? ವಕ್ಫ್ ಬೋರ್ಡ್ಗೆ 1.28 ಎಕರೆ ಆಸ್ತಿಯನ್ನು ಸೇರಿಸಿದ್ದಕ್ಕೆ ಮಠದ ಭಕ್ತರ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದೆ ರೀತಿ ಸಿಂದಗಿ ತಾಲೂಕಿನಲ್ಲಿ ಅನೇಕ ಹಿಂದೂ ಮಠಗಳ ಆಸ್ತಿ ಕಬಳಿಸಲು ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ಸೇರ್ಪಡೆ ಮಾಡಿದ್ದಾರೆ ಎಂಬ ಶಂಕೆಯನ್ನು ಮಠದ ಭಕ್ತರು ವ್ಯಕ್ತಪಡಿಸಿದ್ದಾರೆ. ವಕ್ಫ್ ಬೋರ್ಡ್ಗೆ ಸೇರ್ಪಡೆಯಾದ ವಿಚಾರ ತಿಳಿದು ಸಾವಿರಾರು ಭಕ್ತರು ಈಗ ಮಠದ ಮುಂದೆ ಜಮಾಯಿಸುತ್ತಿದ್ದಾರೆ.