ನವದೆಹಲಿ: ಅಹಮದಾಬಾದ್ನಲ್ಲಿ ಕಳೆದ ಜೂನ್ 12 ರಂದು ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ದುರಂತದ ಪ್ರಾಥಮಿಕ ತನಿಖಾ ವರದಿ ಸಲ್ಲಿಕೆಯಾಗಿದ್ದು, ಅದರಲ್ಲಿ ವಿಮಾನ ಅಪಘಾತಕ್ಕೆ ಕಾರಣ ಎನೆಂಬುದು ಬಯಲಾಗಿದೆ. ತನಿಖಾ ಬ್ಯೂರೋ (AAIB) ಸಲ್ಲಿಸಿರುವ 15 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಹಲವು ಆತಂಕಕಾರಿ ಮಾಹಿತಿಗಳು ಬಹಿರಂಗವಾಗಿದೆ. ವರದಿಯ ಪ್ರಕಾರ, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್ಗಳು ಸ್ಥಗಿತಗೊಂಡವು. ಆ ನಂತರ ವಿಮಾನ ಪತನವಾಗಿದೆ ಎಂದು ವರದಿಯಾಗಿದೆ.
ವಿಮಾನದ ಎಂಜಿನ್ಗೆ ಇಂಧನ ಪೂರೈಕೆ ಸ್ಥಗಿತಗೊಂಡಿರುವುದು ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಎಎಐಬಿ ಗಮನಸೆಳೆದಿದೆ. ಆದಾಗ್ಯೂ, ತನಿಖಾ ಬ್ಯೂರೋ, ಈ ವರದಿ ಪ್ರಾಥಮಿಕ ಎಂದು ಹೇಳಿದೆ. ಪ್ರಸ್ತುತ, ಅಪಘಾತದ ವಿವರವಾದ ತನಿಖೆ ನಡೆಯುತ್ತಿದೆ.
ಎಎಐಬಿ ಪ್ರಾಥಮಿಕ ವರದಿಯ ಪ್ರಕಾರ, ಟೇಕಾಫ್ ನಂತರ ಎಂಜಿನ್ಗಳ ಇಂಧನ ಸ್ವಿಚ್ಗಳು ಇದ್ದಕ್ಕಿದ್ದಂತೆ RUN ನಿಂದ CUTOFF ಗೆ ಬದಲಾದವು. ಈ ಘಟನೆ ಕೇವಲ 1 ಸೆಕೆಂಡ್ ಅಂತರದಲ್ಲಿ ಸಂಭವಿಸಿದೆ. ಈ ಸಮಯದಲ್ಲಿ, ಎಂಜಿನ್ಗಳಿಗೆ ಇಂಧನ ಬರುವುದನ್ನು ನಿಂತುಹೋಗಿದೆ. ಕಾಕ್ಪಿಟ್ನಲ್ಲಿ ಪೈಲಟ್ಗಳ ನಡುವೆ ನಡೆದ ಸಂಭಾಷಣೆಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (CVR) ಪ್ರಕಾರ, ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್ ಬಳಿ, ‘‘ನೀವು ಎಂಜಿನ್ ಅನ್ನು ಏಕೆ ಆಫ್ ಮಾಡಿದ್ದೀರಿ’’ ಎಂದು ಕೇಳಿದ್ದಾರೆ. ಆಗ ಮತ್ತೊಬ್ಬ ಪೈಟಲ್, ‘‘ನಾನು ಏನನ್ನೂ ಮಾಡಲಿಲ್ಲ’’ ಎಂದು ಹೇಳಿದ್ದಾರೆ. ಇಬ್ಬರು ಪೈಲಟ್ಗಳ ನಡುವಿನ ಈ ಸಂಭಾಷಣೆ ಗಮನಿಸಿದರೆ, ಯಾರೂ ಉದ್ದೇಶಪೂರ್ವಕವಾಗಿ ಇಂಧನ ಸ್ವಿಚ್ ಕಡಿತಗೊಳಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ತುರ್ತು ಪರಿಸ್ಥಿತಿ ಅರಿವಿಗೆ ಬರುತ್ತಿದ್ದಂತೆಯೇ ವಿಮಾನದ ಸ್ವಯಂಚಾಲಿತ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಪ್ರಯತ್ನಿಸಲಾಯಿತು. ಆದಾಗ್ಯೂ, ರಾಮ್ ಏರ್ ಟರ್ಬೈನ್ (RAT) ಅಂದರೆ, ತುರ್ತು ಫ್ಯಾನ್ ಮತ್ತು ಎಪಿಯುನಂತಹ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದ ನಂತರವೂ, ವಿಮಾನವನ್ನು ಅಪಘಾತದಿಂದ ರಕ್ಷಿಸಲು ಪೈಟಲ್ಗಳಿಗೆ ಸಾಧ್ಯವಾಗಲಿಲ್ಲ. ವಿಮಾನದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಇದ್ದಾಗ ಮಾತ್ರ ರಾಮ್ ಏರ್ ಟರ್ಬೈನ್ ಸಕ್ರಿಯವಾಗುತ್ತದೆ. ಇದರರ್ಥ, ಎಂಜಿನ್ ಸ್ಥಗಿತಗೊಂಡಿದ್ದು ವಿಮಾನದ ವಿದ್ಯುತ್ ಪೂರೈಕೆ ಮೇಲೂ ಪರಿಣಾಮ ಬೀರಿತ್ತು.
ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಜೂನ್ 12 ರಂದು ಅಹಮದಾಬಾದ್ನಿಂದ ಲಂಡನ್ ಗ್ಯಾಟ್ವಿಕ್ಗೆ ಹೊರಟ ಸ್ವಲ್ಪ ಸಮಯದ ನಂತರ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಆವರಣಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 241 ಪ್ರಯಾಣಿಕರು ಸೇರಿದಂತೆ 275 ಜನರು ಸಾವನ್ನಪ್ಪಿದ್ದರು.