ಕಾರ್ಕಳ: ಗಂಡನ ಕೊಲೆ ಪ್ರಕರಣದಲ್ಲಿ ಬಂಧಿತಳಾಗಿ ಪ್ರಿಯಕರನ ಜೊತೆ ಜೈಲಿನ ಕಂಬಿ ಎಣಿಸುತ್ತಿರುವ ಆರೋಪಿ ಪ್ರತಿಮಾಳ ಶೋಕಿ ಜೀವನ ಹಾಗೂ ಶ್ರೀಮಂತಿಕೆ ಜೀವನ ನಡೆಸುವ ಕನಸು ಆಕೆಯ ಕರಾಳಮುಖವನ್ನೇ ಬಯಲು ಮಾಡಿದೆ. ಹೆಂಡತಿಯ ಮೋಸದ ಜಾಲ ಅರಿಯದೇ ಗಂಡ ಬಾಲಕೃಷ್ಣ ಪೂಜಾರಿ ಆಸ್ಪತ್ರೆಯಲ್ಲಿ ಯಮಯಾತನೆ ಅನುಭವಿಸಿ ನರಹಂತಕಿ ಪತ್ನಿಯ ಕೈಯಲ್ಲೇ ಭೀಕರವಾಗಿ ಕೊಲೆಯಾಗಿದ್ದ. ಪತಿಗೆ ಸ್ಲೋ ಪಾಯಿಸನ್ ನೀಡಿ ಆ ಮೂಲಕ ಚಿಕಿತ್ಸೆಗೆಂದು ಜನರಿಂದ ಹಣ ಸಂಗ್ರಹಿಸಿ ಆ ಮೂಲಕ ಸುಲಭದಲ್ಲಿ ಹಣ ಮಾಡುವ ತಂತ್ರ ರೂಪಿಸಿದ್ದಳು.ಗಂಡನ ಚಿಕಿತ್ಸೆಗಾಗಿ ಪತ್ನಿ ಪ್ರತಿಮಾ ತನ್ನದೇ ಬ್ಯಾಂಕ್ ಅಕೌಂಟ್ ನಂಬರ್ ನೀಡಿದ್ದಳು. ಈಕೆಯ ಕಷ್ಟಕ್ಕೆ ಸ್ಪಂದಿಸಿದ ಸುಮಾರು 2 ಲಕ್ಷಕ್ಕೂ ಮಿಕ್ಕಿ ಹಣ ಸಂಗ್ರಹವಾಗಿತ್ತು ಎನ್ನಲಾಗಿದೆ.
ವಿಷಪ್ರಾಶನದಿಂದ ಬಾಲಕೃಷ್ಣ ಆರೋಗ್ಯ ಹದಗೆಟ್ಟಾಗ ಕಾಮಾಲೆ ಎಂದು ನಂಬಿಸಿ ಬಾಲಕೃಷ್ಣ ಸ್ಥಳಿಯ ಕ್ಲಿನಿಕ್ ಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಆರೋಗ್ಯ ಸುಧಾರಿಸದ ಹಿನ್ನಲೆಯಲ್ಲಿ ಪತ್ನಿ ಪ್ರತಿಮಾಳೇ ಗಂಡನನ್ನು ಕಾರ್ಕಳದ ಟಿ.ಎಂ ಪೈ ರೋಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ನಾಟಕವಾಡಿದ್ದಳು. ಯಾವುದೇ ಆಸ್ಪತ್ರೆಗೆ ರೋಗಿ ದಾಖಲಾದ ಬಳಿಕ ರೋಗ ತಪಾಸಣೆ ಮಾಡಿ ವರದಿ ನೀಡುತ್ತಾರೆ, ಆದರೆ ವೈದ್ಯರ ವರದಿಯ ಹಾಗೂ ಚಿಕಿತ್ಸೆಯ ಮಾಹಿತಿ ತನ್ನ ಸಂಬAಧಿಕರಿಗೂ ನೀಡದೇ ಬಚ್ಚಿಟ್ಟಿದ್ದಳು. ಇದಾದ ಬಳಿಕ ಮಣಿಪಾಲ ಕೆಎಂಸಿ ಆಸ್ಪತೆಗೆ ದಾಖಲಿಸಿ, ಅಲ್ಲಿಂದ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಳು.ಇದಾದ ಬಳಿಕ ನರರೋಗದ ಕಾಯಿಲೆ ಎಂದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಳು.ಪ್ರತಿಮಾ ಪದೇಪದೇ ಯಾಕೆ ಆಸ್ಪತ್ರೆಯನ್ನು ಬದಲಿಸುತ್ತಿದ್ದಳು, ಸರಿಯಾದ ಔಷಧಿಯನ್ನು ನೀಡುತ್ತಿದ್ದಳೇ ಎನ್ನುವ ಹಲವಾರು ಅಂಶಗಳು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.ಆಸ್ಪತ್ರೆಗಳಲ್ಲಿ ಬಾಲಕೃಷ್ಣ ಪೂಜಾರಿಗೆ ನೀಡಿ ವೈದ್ಯಕೀಯ ಚಿಕಿತ್ಸೆಯ ಮಾಹಿತಿ ಹಾಗೂ ವೈದ್ಯಕೀಯ ವರದಿಯನ್ನು ಪರಿಶೀಲಿಸಿದರೆ ಸತ್ಯಾಂಶ ಹೊರಬರುವ ಸಾಧ್ಯತೆಯಿದೆ.ಗಂಡ ಬಾಲಕೃಷ್ಣ ಅಂತಿಮವಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗುವ ಸೂಚನೆ ಸಿಕ್ಕಾಗ ಪ್ರಿಯಕರ ದಿಲೀಪ್ ಹೆಗ್ಡೆ ಜತೆ ಸೇರಿ ಆತನನ್ನು ಮೋಸದಿಂದ ಮುಗಿಸುವ ಪ್ಲಾನ್ ಸಿದ್ದಪಡಿಸಿದ್ದಳು.
ಗಂಡನ ಚಿಕಿತ್ಸೆ ನೆಪದಲ್ಲಿ ಸಂಗ್ರಹವಾದ ಹಣದಿಂದ ಶೋಕಿ ಜೀವನ ನಡೆಸುವ ಯೋಚನೆಯಲ್ಲಿದ್ದ ವಿಷಕನ್ಯೆ ಪ್ರತಿಮಾಳಿಗೆ ಪ್ರಿಯಕರ ದಿಲೀಪ್ ಹೆಗ್ಡೆಯ ಆಸ್ತಿಗೆ ಹಕ್ಕುದಾರಳಾಗಿ ಐಷಾರಾಮಿ ಮನೆ,ಕಾರು ಶೋಕಿ ಜೀವನದ ಕನಸು ಕಂಡಿದ್ದಳು.ದುಡ್ಡು ಹಾಗೂ ಆಸ್ತಿಯ ದುರಾಸೆಗೆ ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುವುದಕ್ಕೆ ಬಾಲಕೃಷ್ಣ ಪೂಜಾರಿಯ ಹತ್ಯೆ ಪ್ರಕರಣ ಅತ್ತುತ್ತಮ ನಿದರ್ಶನ.