ಹೆಬ್ರಿ,ಆ 06: ಮುನಿಯಾಲು ಮಾರಿಯಮ್ಮ ದೇವಸ್ಥಾನ ಹಾಗೂ ಕಾಡುಹೊಳೆ ದತ್ತ ಮಂದಿರದ ಬಾಗಿಲು ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಪ್ರಕರಣ ಮಂಗಳವಾರ ಮಧ್ಯಾಹ್ನ ನಡೆದಿದೆ.
ವಿಘ್ನೇಶ್ವರ ಎಂಬವರು ಮುನಿಯಾಲು ಗದ್ದುಗೆ ಮತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದು,ಆ. 05ರಂದು ಮಾರಿಗುಡಿಯಲ್ಲಿ ವಿಶೇಷ ಪೂಜೆ ಇದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ಯಾಗ ಮಂಟಪ ಕಡೆಯಿಂದ ಜೋರಾದ ಶಬ್ದ ಬಂದ ಕಾರಣದಿಂದ ವಿಘ್ನೇಶ್ವರ ಎದ್ದು ನೋಡಿದಾಗ ವ್ಯಕ್ತಿಯೊಬ್ಬ ದೇವಸ್ಥಾನದ ಯಾಗ ಮಂಟಪದ ಬಳಿ ಇದ್ದ ಸ್ಟೀಲ್ ಕಾಣಿಕೆ ಡಬ್ಬಿಯ ಚಿಲಕ ಹಾಗೂ ಬೀಗದ ಕೊಂಡಿಯನ್ನು ಕಬ್ಬಿಣದ ರಾಡ್ ಬಳಸಿ ಒಡೆದು ತೆಗೆದು ಕಾಣಿಕೆ ಡಬ್ಬಿಯಲ್ಲಿರುವ ಹಣವನ್ನು ಕಳವು ಮಾಡಲು ಪ್ರಯತ್ನ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.ಬಳಿಕ ಸ್ಥಳೀಯರು ಆತನನ್ನು ಹಿಡಿದು ವಿಚಾರಿಸಿದಾಗ ಆತ ವರಂಗ ಗ್ರಾಮದ ರಾಘವೇಂದ್ರ ಎಂದು ತಿಳಿದುಬಂದಿದೆ. ವಿಪರೀತ ಮದ್ಯವ್ಯಸನಿಯಾಗಿದ್ದ ಆತ ಕುಡಿಯಲು ಹಣಕ್ಕಾಗಿ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾನೆ. ಇತ್ತ ಕಾಡುಹೊಳೆ ದತ್ತ ಮಂದಿರದಲ್ಲಿ ಕೂಡ ಕಳ್ಳತನಕ್ಕೆ ಯತ್ನ ನಡೆದಿದ್ದು, ಈತನೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.