ಕಾರ್ಕಳ: ಗೋವಿನಲ್ಲಿ ಮುಕ್ಕೋಟಿ ದೇವತೆಗಳು ವಾಸವಾಗಿದ್ದಾರೆ.ಗೋದಾನ ಭೂಮಿಯ ಅತ್ಯಂತ ಶ್ರೇಷ್ಠ ದಾನವಾಗಿದೆ.ಗೋವು ಕಲಿಯುಗದ ಕಾಮಧೇನು,ಇಂತಹ ಪವಿತ್ರ ಗೋಮಾತೆಯನ್ನು ಪೂಜಿಸಿದರೆ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ ಎಂದು ಕಮಲಾಕ್ಷ ಕಾಮತ್ ಹೇಳಿದರು.
ಅವರು ಬಜಗೋಳಿ ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಭಾನುವಾರ ಬಜಗೋಳಿಯ ರವೀಂದ್ರ ಶೆಟ್ಟಿಯವರ ನಿವಾಸದಲ್ಲಿ ಗೋದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ.ಸುಧಾಕರ ಶೆಟ್ಟಿಯವರು ಮಾತನಾಡಿ, ದನ ಕಾಯುವವನನ್ನು ಧನ ಕಾಯುತ್ತದೆ ಎನ್ನುವ ನಾಣ್ನುಡಿಯಿದೆ. ಗೋ ಮಾತೆ ಎಲ್ಲಾ ಕಾಲಗಳಲ್ಲೂ ಶ್ರೇಷ್ಠತೆಯನ್ನು ಪಡೆಯುತ್ತಾಳೆ . ಗೋಮಾತೆಯ ಪೂಜೆ ಮಾಡುವುದು ಸನಾತನ ಧರ್ಮದವರಾದ ನಮ್ಮೆಲ್ಲರ ಕರ್ತವ್ಯ. ಭಗವಂತ ರವೀಂದ್ರ ಶೆಟ್ಟಿಯವರ ಕುಟುಂಬಕ್ಕೆ ಆಶೀರ್ವಾದ ಮಾಡಲಿ ಎಂದು ಶುಭ ಹಾರೈಕೆ ಮಾಡಿದರು.
ಖ್ಯಾತ ವಿದ್ವಾನ್ ದಾಮೋದರ ಶರ್ಮಾ ಮಾತನಾಡಿ, ಗೋಮಾತೆ ತನ್ನನ್ನು ಸಾಕಿದವರಿಗೆ ಮಾತ್ರ ಅಲ್ಲ. ತನ್ನನ್ನು ಕಡಿಯುವ ದೂರ್ತರಿಗೂ ಹಾಲು ಕೊಡುವ ಕಾಮಧೇನು. ಅನೇಕ ಪುಣ್ಯಾತ್ಮರುಗಳನ್ನು ಒಳಗೊಂಡ ಈ ಪುಣ್ಯ ಭೂಮಿಯಲ್ಲಿ ರವೀಂದ್ರ ಶೆಟ್ಟಿಯವರು ಕೂಡ ಜನ್ಮ ತಳೆದು ಸಮಾಜಕ್ಕೆ ಒಳಿತು ಮಾಡಲು ಹೊರಟಿದ್ದಾರೆ. ಇದು ಸಮಾಜಕ್ಕೆ ಸಂತಸ ತರುವ ವಿಚಾರ ಎಂದು ಹೇಳಿದರು.
ಅವರವರ ನಂಬಿಕೆ,ಪರಂಪರೆ ಅವರವರ ಧರ್ಮಕ್ಕೆ ದೊಡ್ಡದು. ಗೋವನ್ನು ಕಳೆದುಕೊಂಡವರು ಪಡುವ ಸಂಕಟಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಗೋವನ್ನು ಕಳಕೊಂಡಾಗ ಅದನ್ನು ಸಾಕುವ ವ್ಯಕ್ತಿಗೆ ಆಗುವ ನೋವು ತಾಯಿಯನ್ನು ಕಳಕೊಂಡಷ್ಟು ನೋವಾಗುತ್ತದೆ.ಗೋಮಾತೆಯನ್ನು ಕೊಲ್ಲುವ ಮಟ್ಟಕ್ಕೆ ಬಂದಾಗಲೂ ಆತನಿಗೆ ಒಳ್ಳೆಯದಾಗಲಿ ಎಂದು ಬಯಸುವ ಗೋಮಾತೆಯ ಶ್ರೇಷ್ಠತೆಯನ್ನು ಪ್ರಶ್ನೆ ಮಾಡಲು ಸಾಧ್ಯವೇ ಇಲ್ಲ ಎಂದರು. ಮನುಷ್ಯನ ಹುಟ್ಟಿನಿಂದ ಅಂತ್ಯದ ವರೆಗೂ ಹಾಗೂ ಮಗುವನ್ನು ಸಾವಿನಿಂದ ಜಯಿಸಲು ಕೂಡ ಧಾರ್ಮಿಕ ವಿಧಿ ವಿಧಾನಗಳು ನಮ್ಮ ಪೂಜಾ ವ್ಯವಸ್ಥೆಯಲ್ಲಿದೆ ಎಂದು ಹೇಳಿದರು
ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಯೋಜನಾ ನಿರ್ದೇಶಕ ಅನಿಲ್ ಕುಮಾರ್ ಮಾತನಾಡಿ, ಸತ್ಯವನ್ನು ಬೆಂಬಲಿಸುವ ವ್ಯಕ್ತಿತ್ವವನ್ನು ಡಾ. ರವೀಂದ್ರ ಶೆಟ್ಟಿಯವರದ್ದು,ಗೋವು ಸಾಕಾಣಿಕೆ ಅತ್ಯಂತ ಸವಾಲಿನ ವೃತ್ತಿ, ಪಶು ಸಂಗೋಪನೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಇವತ್ತು ಹೈನುಗಾರಿಕೆಯು ಈ ವ್ಯವಸ್ಥೆಯಲ್ಲಿ ಬಹಳ ಉತ್ತಮ ಮಟ್ಟದಲ್ಲಿದೆ. ಎಂದರು.
ಸೃಷ್ಟಿಯನ್ನು ಪಾಲನೆ ಮಾಡುವವನು ಗೋವನ್ನು ಕೂಡ ಪಾಲನೆ ಮಾಡುತ್ತಾನೆ. ಇದೊಂದು ಸತ್ಸಂಗ. ಒಳ್ಳೆಯ ಕಾರ್ಯಕ್ರಮ ಮಾಡುವ ವೇದಿಕೆ. ಜನರಲ್ಲಿ ಉತ್ತಮ ಗುಣಗಳನ್ನು ಮೂಡಿಸುವ ಕಾರ್ಯ. ಇದನ್ನು ಮಾಡುವ ರವೀಂದ್ರ ಶೆಟ್ಟಿಯವರ ಕಾರ್ಯ ಮಹತ್ತರವಾದುದು ಎಂದು ಹೇಳಿದರು.
ಉದ್ಯಮಿ ಹಾಗೂ ಸಮಾಜ ಸೇವಕರಾದ ಬೋಳ ಪ್ರಶಾಂತ್ ಕಾಮತ್ ಮಾತನಾಡಿ, ರವೀಂದ್ರ ಶೆಟ್ಟಿಯವರು ಹಿಂದೂ ಸಮಾಜ ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕಾರ್ಯವನ್ನು ಅವರು ಮಾಡುತ್ತಿರುವುದು ನಿಜಕ್ಕೂ ಶ್ರೇಷ್ಠ ಎಂದರು.
ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶ ಸಮಿತಿ ಅಧ್ಯಕ್ಷ ಗಣಪತಿ ಹೆಗ್ಡೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಧರ್ಮ, ಪರಂಪರೆಯನ್ನು ಉಳಿಸುತ್ತ ಗಮನ ನೀಡದಿದ್ದರೆ ಮನು ಕುಲದ ಅಧಃಪತನ ಆರಂಭ ಆಗುತ್ತದೆ. ಪ್ರತಿ ಮನುಷ್ಯನಿಗೂ ಬೇರೆ ಬೇರೆ ರೀತಿಯಲ್ಲಿ ಧರ್ಮ ಉಳಿಸಬೇಕಾದ ಅನಿವಾರ್ಯತೆ ಇದೆ.
ಭಾರತದಲ್ಲಿನ ಸಂಸ್ಕೃತಿ, ಸಂಸ್ಕಾರವನ್ನು ಯಾರು ಕೂಡ ಮರೆಯಬಾರದು. ಅಷ್ಟರ ಮಟ್ಟಿಗೆ ಶ್ರೇಷ್ಠತೆಯನ್ನು ನಮ್ಮ ಪುಣ್ಯ ಭೂಮಿ ಪಡೆದಿದೆ ಎಂದರು.
ಕಾರ್ಯಕ್ರಮದ ರೂವಾರಿ ಡಾ.ರವೀಂದ್ರ ಶೆಟ್ಟಿ ಮಾತನಾಡಿ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ . ಉತ್ತಮ ಕಾರ್ಯ ಮಾಡುವ ಜೊತೆಗೆ ಉತ್ತಮ ಕಾರ್ಯವನ್ನು ಮಾಡುವವರಿಗೆ ಕೂಡ ಸಹಕಾರ ನೀಡಬೇಕು. ರಾಜಕೀಯವಾಗಿ, ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುತ್ವದ ಪರವಾಗಿ ಸಹಕಾರ ನೀಡುವವರಿಗೆ ಮಾತ್ರ ನಾವು ರಾಜಕೀಯ ಬೆಂಬಲ ನೀಡಬೇಕು. ಪ್ರಸ್ತುತ ಸಮಾಜದಲ್ಲಿರುವ ಸಮಸ್ಯೆಗಳನ್ನು ಸರಿ ಪಡಿಸಲು ಎಲ್ಲರೂ ಧ್ವನಿ ಎತ್ತಬೇಕು. ಆಗ ಮಾತ್ರ ಹಿಂದೂ ಸಮಾಜ ಉಳಿಯಲು ಸಾಧ್ಯವಿದೆ.
ಬದುಕಿನಲ್ಲಿ ಶ್ರೇಷ್ಠ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ಬದುಕನ್ನು ಪಾವನ ಮಾಡಿ ಕೊಳ್ಳಬೇಕು ಎಂದ ಅವರು ಇಂದಿನ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದವರಿಗೆ ಭಗವಂತ ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೀರಾಂಜಯ್ ಹೆಗ್ಡೆ ಹಾಗೂ ರಾಜೇಂದ್ರ ಚಕ್ಕೇರಾರನ್ನು ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ನಂದಕುಮಾರ್ ಹೆಗ್ಡೆ ಅಜೆಕಾರು, ಕರ್ನಾಟಕ ಜೈನ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ನೇಮಿರಾಜ ಅರಿಗ, ಸತ್ಯೇಂದ್ರ ಭಟ್ ಕಾರ್ಕಳ,ಕೂಷ್ಮಾಂಡಿನಿ ಬಳಗದ ಮಹಾವೀರ್ ಜೈನ್, ಸುಲ್ಕೆರಿ ಶ್ರೀ ರಾಮ ಶಾಲೆಯ ಸಂಚಲಕರಾದ ಗಣೇಶ್ ಹೆಗ್ಡೆ, ಅಮ್ಮ ಚಾರಿಟೇಬಲ್ ಟ್ರಸ್ಟ್ ನ ಅವಿನಾಶ್ ಶೆಟ್ಟಿ, ಗುರು ಪ್ರಸಾದ್ ನಾರಾವಿ, ಸುಂದರ ಹೊಸ್ಮಾರು, ಭಜರಂಗ ದಳದ ಜಿಲ್ಲಾ ಸಂಚಾಲಕರಾದ ಚೇತನ್ ಪೇರಲ್ಕೆ, ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.
ಕುಮಾರಿ ಶ್ರೇಯಾ ರವೀಂದ್ರ ಶೆಟ್ಟಿ ಪ್ರಾರ್ಥನೆ ಮಾಡಿದರು. ಡಾ ಸ್ನೇಹ ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಸತೀಶ್ ಕುಲಾಲ್ ಹೊಸ್ಮಾರ್ ಪ್ರಸ್ತಾವನೆಗೈದರು.ಕು ಶ್ರೇಯಾ ರವೀಂದ್ರ ಶೆಟ್ಟಿ ಧನ್ಯವಾದ ಸಲ್ಲಿಸಿದರು
ನಾಗೇಶ್ ನಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಯತೀಶ್ ಶೆಟ್ಟಿ, ಅಶೋಕ್ ಎಂ. ಕೆ, ಶ್ರೇಯಾಂಕ್ ಆರ್ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು
































































































