ಮಂಗಳೂರು : ಗಣೇಶ ಚತುರ್ಥಿಯ ಅಂಗವಾಗಿ ನಡೆಯುವ ಮೆರವಣಿಗೆಯ ವೇಳೆ ದೈವಾರಾಧನೆಗೆ ಸಂಬಂಧಿಸಿದ ಸ್ಥಬ್ಧಚಿತ್ರ/ಟ್ಯಾಬ್ಲೋಗಳನ್ನು ನಿಷೇಧಿಸಲು ಸಂಘಟನೆಯ ಮೂಲಕ ಕರೆ ನೀಡಬೇಕು ಎಂದು ಕದ್ರಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಲದಲ್ಲಿ ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.
ಹಿಂದೂ ಧರ್ಮದ ಅವಿಭಾಜ್ಯ ನಂಬಿಕೆಯಾಗಿರುವ ದೈವಗಳನ್ನು ಟ್ಯಾಬ್ಲೋಗಳಲ್ಲಿ ಪ್ರದರ್ಶಿಸುವುದನ್ನು ಸಂಘಟನೆ ಸಹಿಸುವುದಿಲ್ಲ. ಈ ಕುರಿತು ಜಿಲ್ಲೆಯಿಂದ ಸಂಘಟನೆಯ ಪ್ರಮುಖರಿಗೆ, ಕಾರ್ಯಕರ್ತರಿಗೆ, ಕಾರ್ಯಕ್ರಮದ ಆಯೋಜಕರಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡುವುದಾಗಿ ಮನವಿ ಸ್ವೀಕರಿಸಿದ ಸಂಘಟನೆಯ ಪ್ರಮುಖರು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಚ್.ಕೆ ಪುರುಷೋತ್ತಮ, ವಿಎಚ್ಪಿ ಪ್ರಾಂತ ಸೇವಾ ಸಹ ಪ್ರಮುಖ್ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾ ಉಪಾಧ್ಯಕ್ಷರಾದ ಸಂಜೀವ ಸೂಟರ್ಪೇಟೆ, ಭಜರಂಗದಳ ವಿಭಾಗ ಸಂಯೋಜಕರಾದ ಪುನೀತ್ ಅತ್ತಾವರ ಹಾಗೂ ದೈವಾರಾಧನೆ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾದ ಭರತ್ ಬಳ್ಳಾಲ್ ಬಾಗ್, ಕಾರ್ಯದರ್ಶಿಗಳಾದ ಗಿರೀಶ್ ಸುವರ್ಣ ಮೂಲ್ಕಿ, ಸದಸ್ಯರಾದ ಮಹೇಶ್ ಅಮೀನ್ ಹಾಗೂ ಸಂತು ಅನಂತಾಡಿ ಉಪಸ್ಥಿತರಿದ್ದರು.