Share this news

ಮಂಗಳೂರು: ‘ವಿಧಾನ ಪರಿಷತ್‌ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಬಿಜೆಪಿ ಪ್ರಾದೇಶಿಕ ನ್ಯಾಯ ಮರೆತಿದೆ. ಬಿಜೆಪಿಗೂ ಕಾಂಗ್ರೆಸ್‌ ಮಾದರಿಯ ಗಾಡ್‌ ಫಾದರ್‌ ಸಂಸ್ಕೃತಿ ಅಂಟಿಕೊಂಡಿದ್ದು,ಪಕ್ಷಕ್ಕಾಗಿ ದುಡಿಯುವ ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ನೈರುತ್ಯ ಪಧವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್‌ ಕಿಡಿಕಾರಿದ್ದಾರೆ.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕರಾವಳಿಯ ಜನರು ತಾವು ಹೇಳಿದ್ದೆಲ್ಲವನ್ನೂ ಕೇಳಿ ಸುಮ್ಮನಿರುತ್ತಾರೆ ಎಂಬ ಭಾವನೆ ಬಿಜೆಪಿ ನಾಯಕರಲ್ಲಿದೆ. ಅನ್ಯಾಯವಾದರೆ ಕರಾವಳಿಯ ಜನರೂ ಪ್ರತಿಭಟಿಸುತ್ತಾರೆ ಎಂಬುದನ್ನು ತೋರಿಸಿಕೊಡಲು ಚುನಾವಣೆಗೆ ನಿಂತಿದ್ದೇನೆ ಎಂದು ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡಿದರು.
ನನಗೆ ಟಿಕೆಟ್‌ ಕೊಡದಿದ್ದರೆ ಪಕ್ಷದ ಇತರ ಹಿರಿಯರಿಗೆ ಕೊಡಬಹುದಿತ್ತು. ಶಿವಮೊಗ್ಗದಲ್ಲಿ ನಮ್ಮ ಕಾರ್ಯಕರ್ತ ಹರ್ಷನ ಕೊಲೆ ಸಂದರ್ಭದಲ್ಲಿ ಕಾಂಗ್ರೆಸ್‌, ಎಡಪಕ್ಷಗಳು, ಮುಸ್ಲಿಂ ಮುಖಂಡರು, ನಗರ ನಕ್ಸಲರ ಶಾಂತಿಗಾಗಿ ನಡಿಗೆಯ ನೇತೃತ್ವ ನೀಡಿ, ಇತ್ತೀಚೆಗಷ್ಟೇ ಬಿಜೆಪಿ ಸೇರಿದವರಿಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಟಿಕೆಟ್‌ ನೀಡಲಾಗಿದೆ. ನಾನು ಬಾಲ್ಯದಿಂದಲೂ ಸಂಘ ಪರಿವಾರದಲ್ಲಿದ್ದು, ಕರಂಬಳ್ಳಿ ಸಂಜೀವ ಶೆಟ್ಟಿ, ಡಾ. ವಿಎಸ್‌ ಆಚಾರ್ಯರ ಮಾರ್ಗದರ್ಶನದಲ್ಲಿ ಬೆಳೆದವನು ಎಂದು ತಿಳಿಸಿದರು.
ನಾನು ಪಕ್ಷೇತರನಾಗಿ ಸ್ಪರ್ಧಿಸಿದರೂ, ನೈತಿಕವಾಗಿ ಬಿಜೆಪಿಯ ವಿರುದ್ಧ ಹೋಗಿಲ್ಲ. ನಾನು ಗೆದ್ದರೂ, ಸೋತರೂ ಬಿಜೆಪಿಯಲ್ಲೇ ಇರುತ್ತೇನೆ. ಪಕ್ಷದಿಂದ ಉಚ್ಛಾಟನೆ ಮಾಡಿದರೂ ಬಿಜೆಪಿ ಕಾರ್ಯಕರ್ತನಾಗಿ ಇರುತ್ತೇನೆ. ಯಾರನ್ನೂ ಸೋಲಿಸಲು ನಾನು ಚುನಾವಣೆಗೆ ನಿಂತಿಲ್ಲ. ಗೆದ್ದು ಸಕ್ರಿಯ ಶಾಸಕನಾಗಿ, ಪದವೀಧರರ ಧ್ವನಿಯಾಗಿ ಕೆಲಸ ಮಾಡಲು ಚುನಾವಣೆಗೆ ನಿಂತಿದ್ದೇನೆ ಅಷ್ಟೇ, ಎಂದು ತಮ್ಮ ಸ್ಪರ್ಧೆಯ ಬಗ್ಗೆ ಸ್ಪಷ್ಟನೆ ನೀಡಿದರು.
ಒಮ್ಮೆ ನಗರಸಭೆ ಚುನಾವಣೆಯಲ್ಲಿ ಮತ್ತು ಮೂರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿಂತು ಗೆದ್ದು, ಉಡುಪಿಯ ಅಭಿವೃದ್ಧಿ ಮಾಡಿದ್ದೇನೆ ಎಂಬ ಸಂತೃಪ್ತಿ ಇದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗದಿದ್ದರೂ, ಪಕ್ಷ ನಿಷ್ಠೆಯಿಂದ ಕೆಲಸ ಮಾಡಿ, ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಿದ್ದೇನೆ. ಲೋಕಸಭೆ ಚುನಾವಣೆ ಪ್ರಭಾರಿಯಾಗಿ ಶಿವಮೊಗ್ಗದಲ್ಲಿ 42 ದಿನ ಕೆಲಸ ಮಾಡಿದ್ದೇನೆ. ಹೀಗಿದ್ದರೂ, ವಿಧಾನ ಪರಿಷತ್‌ ಚುನಾವಣೆಯಲ್ಲಿ ನನಗೆ ಟಿಕೆಟ್‌ ನೀಡದೆ ಕರಾವಳಿಯಲ್ಲಿ ಬಿಜೆಪಿ ಮತ ಹಾಕುವವರಿಗೆ ಅನ್ಯಾಯ ಮಾಡಲಾಗಿದೆ ಎಂದು ರಘುಪತಿ ಭಟ್‌ ಆಕ್ರೋಶ ವ್ಯಕ್ತಪಡಿಸಿದರು

 

 

 

                        

                          

 

Leave a Reply

Your email address will not be published. Required fields are marked *