ಉಡುಪಿ ಸೆ.27: ಬಸ್ ಮಾಲೀಕ ಹಾಗೂ ರೌಡಿಶೀಟರ್ ಸೈಫುದ್ದೀನ್ ನ್ನು ಮಲ್ಪೆಯ ಕೊಡವೂರಿನಲ್ಲಿ ಶನಿವಾರ ಮುಂಜಾನೆ ಭೀಕರವಾಗಿ ಹತ್ಯೆಗೈದ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.
ಆರೋಪಿಗಳಾದ ಡಯಾನ ಕುಕ್ಕಿಕಟ್ಟೆಯ ಫೈಜಲ್ ಖಾನ್, ಕರಂಬಳ್ಳಿಯ ಜನತಾ ಕಾಲೋನಿಯ ಮೊಹಮ್ಮದ್ ಶರೀಫ್ ಮತ್ತು ಸುರತ್ಕಲ್ ಚೊಕ್ಕಬೆಟ್ಟಿನ ಶುಕ್ರು ಯಾನೆ ಅದ್ದು ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿರುವ ಕುರಿತು ಮಾಹಿತಿ ಲಭಿಸಿದೆ.
ಸೈಫುದ್ದೀನ್ ಹಾಗೂ ಆತನ ಮೂವರು ಸ್ನೇಹಿತರು ಮಣಿಪಾಲದಿಂದ ಕೊಡವೂರಿನ ಸೈಫುದ್ದೀನ್ ಮನೆಗೆ ಒಂದೇ ಕಾರಿನಲ್ಲಿ ತೆರಳಿದ್ದರು. ಸೈಫುದ್ದೀನ್ ತನ್ನ ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಮೂವರು ಆರೋಪಿಗಳು ಏಕಾಏಕಿ ಹಿಂದಿನಿಂದ ಚೂರಿ ಹಾಗೂ ತಲವಾರಿನಿಂದ ಇರಿದು ಕೊಲೆಗೈದಿದ್ದಾರೆ.
ಈ ಮೂವರು ಸೈಫುದ್ದೀನ್ ಮಾಲಕತ್ವದ ಎಕೆಎಂಎಸ್ ಬಸ್ ನಲ್ಲಿ ಚಾಲಕರಾಗಿ ದುಡಿಯುತ್ತಿದ್ದರು. ಅಲ್ಲದೇ, ಈ ಹಿಂದೆ ಸೈಫುದ್ದೀನ್ ಮುಂದಾಳತ್ವದಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿಯೂ ಈ ಮೂವರು ಭಾಗಿಯಾಗಿದ್ದರು ಎನ್ನಲಾಗಿದೆ.
ಈ ಪೈಕಿ ಅಬ್ದುಲ್ ಶುಕೂರು ಮತ್ತು ಶರೀಫ್ ಈಗಾಗಲೇ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮೂವರು ಆರೋಪಿಗಳು ಸೈಫುದ್ದೀನ್ ನ ಜೊತೆಗಿದ್ದು, ವ್ಯವಹಾರಗಳಲ್ಲಿ ಸಹಕಾರ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.ಹತ್ಯೆಗೆ ನಿಖರವಾದ ಕಾರಣ ಇನ್ನಷ್ಟೇ ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸರು ಮೂರು ತಂಡ ರಚಿಸಿದ್ದು, ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.