ಉಡುಪಿ, ಅ.15: ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿದ್ದ ಮೂವರು ಮಕ್ಕಳು ಜಲಸಮಾಧಿಯಾಗಿದ್ದಾರೆ. ಹೊಸಹಿತ್ಲು ಕಡಲ ತೀರದಲ್ಲಿ ಈ ದುರಂತ ನಡೆದಿದ್ದು,ಕಿರಿಮಂಜೇಶ್ವರ ಶಾಲೆಯ 9ನೇ ತರಗತಿಯ ಆಶಿಶ್ ದೇವಾಡಿಗ(12ವ), ಕಿರಿ ಮಂಜೇಶ್ವರ ಹೈಸ್ಕೂಲ್ ನ 10ನೇ ತರಗತಿ ವಿದ್ಯಾರ್ಥಿ ಸೂರಜ್ ಪೂಜಾರಿ (16ವ) ಹಾಗೂ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಂಕೇತ ದೇವಾಡಿಗ(18ವ) ಮೃತ ಬಾಲಕರು.
ನಾಲ್ಕು ಮಂದಿ ಮಕ್ಕಳು ಸಂಜೆ ವಾಲಿಬಾಲ್ ಆಟವಾಡಿ, ನಂತರ ಗಾಳ ಹಾಕಲೆಂದು ಕಡಲ ತೀರಕ್ಕೆ ಹೋಗಿದ್ದರು. ನೀರಿನ ಆಳದ ಬಗ್ಗೆ ಅಂದಾಜು ಸಿಗದೆ ಮುಂದೆ ಹೋದ ಕಾರಣ, ಮುಳುಗಡೆಯಾಗಿದ್ದಾರೆ. ಈ ಪೈಕಿ ಈಜಿಕೊಂಡು ಬಚಾವಾಗಿ ಬಂದ ಬಾಲಕ ಸ್ಥಳದಲ್ಲಿ ಇದ್ದ ಮೀನುಗಾರರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಕಡಲಿಗೆ ಹಾರಿ ಮೂವರು ಮಕ್ಕಳನ್ನು ಬಚಾವ್ ಮಾಡಲು ಮೀನುಗಾರರು ಪ್ರಯತ್ನಿಸಿದ್ದಾರೆ.ಆದರೆ ಅಷ್ಟರಲ್ಲಿಯೇ ಕಡಲ ಅಲೆಗಳಲ್ಲಿ ಮೂವರು ಮಕ್ಕಳು ಉಸಿರು ಚೆಲ್ಲಿದ್ದಾರೆ. ತಕ್ಷಣವೇ ಶವಗಳನ್ನು ಮೇಲಕ್ಕೆತ್ತಲಾಗಿದೆ.ಮಕ್ಕಳ ಈ ಸಾವಿನಿಂದ ಹೆತ್ತವರು ಕಂಗಾಲಾಗಿದ್ದಾರೆ.