ಬೆಂಗಳೂರು:ಗ್ಯಾರಂಟಿಗಳ ಆಧಾರದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದೀಗ ಬಡವರನ್ನೇ ಲೂಟಿ ಮಾಡುತ್ತಿದೆ. ಗ್ಯಾರಂಟಿಗಳು ಕೊಡಬೇಕಾದರೆ ಆದಾಯ ಸಂಗ್ರಹವಾಗಬೇಕು ಎನ್ನುವ ಸಚಿವರ ಹೇಳಿಕೆಯ ಮೂಲಕ ಸರ್ಕಾರ ಬಡವರ ಮೇಲೆ ತೆರಿಗೆ ಹೊರೆಯನ್ನು ಸಮರ್ಥಿಸಿಕೊಂಡಿದೆ.
ಕೇವಲ ಗ್ಯಾರಂಟಿ ಕೊಡುವ ನೆಪದಲ್ಲಿ ರಾಜ್ಯದ ಬಡವರ ಮೇಲೆ ತೆರಿಗೆ ಹಾಕಿ,ಇದನ್ನು ವಿರೋಧಿಸಿದರೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡುವ ಮೂಲಕ ರಾಜ್ಯದ ಸಾಮಾನ್ಯ ಜನತೆಗೆ ದ್ರೋಹ ಮಾಡುತ್ತಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ರಾಜ್ಯದ ಪ್ರಗತಿ ಶೂನ್ಯವಾಗಿದೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದ್ದು ಇದನ್ನು ಸರಿಪಡಿಸಲು ಹಲವಾರು ವರ್ಷ ಬೇಕು. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಹೇಳಿದ್ದಾರೆ.
ಜನಸಾಮಾನ್ಯರ ಮೇಲೆ ಹೊರೆ ಹಾಕಿ ಬೇರೆ ರಾಜ್ಯಗಳಿಗೆ ವ್ಯಾಪಾರ ತೊಂದರೆಯಾಗುತ್ತದೆ ಎಂದು ಹೇಳಿ ಪಕ್ಕದ ರಾಜ್ಯಗಳ ಮಿತ್ರ ಪಕ್ಷಗಳ ಹಿತ ಕಾಯುವ ಮೂಲಕ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿರುವುದು ಖಂಡನೀಯ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಪೆಟ್ರೊಲ್, ಡಿಸೇಲ್ ದರ ಕಡಿಮೆ ಇದೆ ಎಂದು ಬಡವರ ಮೇಲೆ ತೆರಿಗೆ ಭಾರ ಹಾಕುವುದು ಯಾವ ನ್ಯಾಯ ? ದರ ಏರಿಕೆ ಮಾಡಿ ಸಮರ್ಥನೆ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿಯವರ ಹೇಳಿಕೆ ಜನ ವಿರೋಧಿಯಾಗಿದೆ ಎಂದರು.
ಉಚಿತ ಗ್ಯಾರಂಟಿ ಎಂದು ಹೇಳಿ ಒಂದು ಕೈಯಲ್ಲಿ ಬಡವರ ಹಣವನ್ನು ಕಿತ್ತುಕೊಂಡು ಇನ್ನೊಂದು ಕೈಯಲ್ಲಿ ಕೊಡುತ್ತಿರುವ ಸರ್ಕಾರದ ನೀತಿಯ ವಿರುದ್ಧ ರಾಜ್ಯದ ಜನರು ಬೀದಿಗೆ ಇಳಿದು ಹೋರಾಟ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.