ಕಾರ್ಕಳ:ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು ಬಿಕರ್ನ ಕಟ್ಟೆ ಚತುಷ್ಪಥ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಸಾಣೂರು ಯುವಕ ಮಂಡಲ ಕಟ್ಟಡದ ಮೈದಾನದ ಬಳಿ ಗುಡ್ಡ ಕಡಿದಿರುವ ಭಾಗದಲ್ಲಿ ಮಣ್ಣು ಜರಿಯದಂತೆ ತಡೆಗೋಡೆ ನಿರ್ಮಾಣ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರನ್ನು ಸಾಣೂರು ಗ್ರಾಮ ಪಂಚಾಯತ್ ಆಡಳಿತ ಮತ್ತು ಪರಿಸರದ ನಾಗರಿಕರು ಒತ್ತಾಯಿಸಿದ್ದರು.
ಗ್ರಾಮಸ್ಥರ ಬೇಡಿಕೆಯನ್ನು ಕಡೆಗಣಿಸಿ ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯವನ್ನು ಸಂಪೂರ್ಣಗೊಳಿಸಿದ್ದರೂ ತಡೆಗೋಡೆ ನಿರ್ಮಾಣ ಕಾರ್ಯವನ್ನು ಬದಿಗೊತ್ತಿದ ಪರಿಣಾಮ ಈ ಸಲದ ಭಾರೀ ಮಳೆಗೆ ಗುಡ್ಡದ ಒಂದು ಪಾರ್ಶ್ವದ ಮಣ್ಣು ಕುಸಿದು, ಗುಡ್ಡದ ಮೇಲಿದ್ದ ಹೈಟೆನ್ಷನ್ ವಿದ್ಯುತ್ ಗೋಪುರ ಹಾಗೂ ಪಕ್ಕದಲ್ಲಿದ್ದ ತಲಾ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ 2 ಓವರ್ ಹೆಡ್ ಟ್ಯಾಂಕುಗಳು ಬೀಳುವ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಾಣೂರು ಗ್ರಾಮಸ್ಥರ ನಿರಂತರ ಸಂಘಟಿತ ಹೋರಾಟದ ಮೂಲಕ ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೇಲೆ ಒತ್ತಡ ಹೇರಿ ಅಪಾಯಕಾರಿ ಸ್ಥಳ *ಪರಿಶೀಲನೆ ನಡೆಸಿ, ಪತ್ರಿಕಾ ಮತ್ತು ದೃಶ್ಯಮಾಧ್ಯಮದ ಮೂಲಕ ನಿರಂತರ ಗುಡ್ಡ ಜರಿದು ಭಾರೀ ದುರಂತ ಸಂಭವಿಸುವ ಬಗ್ಗೆ ಜನ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿದ ಫಲವಾಗಿ ಕೊನೆಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ 60ಮೀಟರ್ ಉದ್ದಕ್ಕೆ ತಡೆಗೋಡೆ ನಿರ್ಮಾಣ ಕಾರ್ಯವನ್ನು ನಡೆಸಲು ಕಾರ್ಯದೇಶವನ್ನು ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ರವರಿಗೆ ನೀಡಿದ್ದು, ಇದೀಗ ತಡೆಗೋಡೆ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ.
ಇದರಿಂದ ಗ್ರಾಮಸ್ಥರು ಹಾಗೂ ಸ್ಥಳೀಯರು ನಿರಾಳರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜನಪರ ಕಾಳಜಿಗೆ ಸಾಣೂರು ನರಸಿಂಹ ಕಾಮತ್ ಧನ್ಯವಾದ ಸಲ್ಲಿಸಿದ್ದಾರೆ


`