ಕುಂದಾಪುರ:ತನ್ನ ತಾಯಿಯ ಶವದ ಜತೆ 4 ದಿನಗಳನ್ನು ಕಳೆದ ಬುದ್ಧಿಮಾಂದ್ಯ ಮಗಳು ಕೊನೆಗೆ ಆಸ್ಪತ್ರೆಗೆ ಸೇರಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ದಾಸನಹಾಡಿ ಗ್ರಾಮದ ನಿವಾಸಿಗಳಾಗಿದ್ದ ತಾಯಿ ಜಯಂತಿ ಶೆಟ್ಟಿ (63), ಮಗಳು ಪ್ರಗತಿ ಶೆಟ್ಟಿ (33) ಮೃತಪಟ್ಟ ದುರ್ದೈವಿಗಳು.
ಘಟನೆಯ ವಿವರ:
ಕುಂದಾಪುರ ತಾಲೂಕಿನ ದಾಸನಹಾಡಿ ಗ್ರಾಮದ ನಿವಾಸಿ ಜಯಂತಿ ಶೆಟ್ಟಿ ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದರು. ಇನ್ನು ಪುತ್ರಿ ಪ್ರಗತಿ ಶೆಟ್ಟಿ ಬುದ್ಧಿಮಾಂದ್ಯ ಕಾಯಿಲೆಯಿಂದ ಬಳಲುತ್ತಿದ್ದರು. ಮಧುಮೇಹ ಕಾಯಿಲೆಯಿಂದ ಬಳುತ್ತಿದ್ದ ಜಯಂತಿ ಶೆಟ್ಟಿ ತೀವೃ ಅಸ್ವಸ್ಥಗೊಂಡು ತನ್ನ ಮನೆಯಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಏನೂ ಅರಿಯದ ಬುದ್ಧಿಮಾಂದ್ಯ ಪುತ್ರಿ ಪ್ರಗತಿ ಶೆಟ್ಟಿ ತಾಯಿಯ ಶವದ ಜೊತೆಗೆ ನಾಲ್ಕು ದಿನ ಅನ್ನ, ನೀರಿಲ್ಲದೆ ಕಳೆದಿದ್ದಾರೆ.
ಮನೆಯಲ್ಲಿ ಜಯಂತಿಯವರ ಮೃತದೇಹ ಕೊಳೆಯಲು ಆರಂಭವಾಗಿ ವಾಸನೆ ಬರುತ್ತಿದ್ದ ಕಾರಣದಿಂದ ಅನುಮಾನಗೊಂಡ ಅಕ್ಕ ಪಕ್ಕದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರು ಆಗಮಿಸಿ ಪ್ರಜ್ಞಾಹೀನ ಸ್ಥಿತಿ ಹೊಂದಿದ್ದ ಪ್ರಗತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಪ್ರಗತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಜಯಂತಿ ಶವವನ್ನು ಕೂಡ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನೆರವೇರಿದೆ.ಇತ್ತ ಆಸ್ಪತ್ರೆಯಲ್ಲಿ ಪ್ರಗತಿ ಶೆಟ್ಟಿ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಬಳಿಕ ಪ್ರಗತಿ ಶೆಟ್ಟಿ ಅವರ ಮರಣೋತ್ತರ ಪರೀಕ್ಷೆ ನೆರವೇರಿದೆ. ನಂತರ ಕುಂದಾಪುರ ಪೊಲೀಸರು ಹೆಂಗವಳ್ಳಿಯಲ್ಲಿ ತಾಯಿ ಮತ್ತು ಮಗಳ ಅಂತ್ಯಸಂಸ್ಕಾರವನ್ನು ಒಟ್ಟಿಗೆ ನೆರವೇರಿಸಿದರು. ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ನಡೆದಿದೆ.