Share this news

 ಬೆಂಗಳೂರು,ಆ.18: ಧರ್ಮಸ್ಥಳದ ಬುರುಡೆ ಪ್ರಕರಣದ ಕುರಿತು ರಾಜಕೀಯ ತಿಕ್ಕಾಟ ಜೋರಾಗಿದ್ದು, ಈ ನಡುವೆ ಗೃಹ ಸಚಿವ ಪರಮೇಶ್ವರ್, FSL ವರದಿ ಬರುವ ತನಕ ಉತ್ಖನನ ಸ್ಥಗಿತಗೊಳಿಸಲಾಗಿದೆ ಎಂದು ಸದನದಲ್ಲಿ ಉತ್ತರಿಸಿದ್ದಾರೆ.
ಪ್ರತಿಪಕ್ಷ ಬಿಜೆಪಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಅಪರಿಚಿತ ಸಾಕ್ಷಿದಾರ ವ್ಯಕ್ತಿಗೆ ಪೊಲೀಸರು ರಕ್ಷಣೆ ನೀಡಿದ್ದಾರೆ. ಸಾಕ್ಷಿದಾರನಿಗೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮದಂತೆ ರಕ್ಷಣೆ ನೀಡಲಾಗಿದೆ. ಅಪರಿಚಿತ ಧರ್ಮಸ್ಥಳದ ಎಲ್ಲಾ ಕಡೆ ತೋರಿಸಿದರೆ ಅಗೆಯುವುದಿಲ್ಲ. ಉತ್ಖನನ ಸ್ಥಗಿತಗೊಳಿಸುವ ಬಗ್ಗೆ ಎಸ್ಐಟಿಯವರೇ ನಿರ್ಧರಿಸಿದ್ದಾರೆ. ಶವ ಶೋಧ ಸ್ಥಗಿತಗೊಳಿಸುವ ಬಗ್ಗೆ ನಾವು ತೀರ್ಮಾನ ಕೈಗೊಂಡಿಲ್ಲ. ಧರ್ಮಸ್ಥಳ ಪ್ರಕರಣ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ಧರ್ಮಸ್ಥಳ ಪ್ರಕರಣದ ಬಗ್ಗೆ ಕ್ಷಣ ಕ್ಷಣವೂ ಒಂದೊಂದು ಹೇಳಿಕೆ ನೀಡಲಾಗುತ್ತಿದೆ. ಈಗ ಅನಗತ್ಯ ಚರ್ಚೆ ಬೇಡ, ತನಿಖೆ ಬಳಿಕ ಸತ್ಯಾಂಶ ಹೊರಬರುತ್ತೆ. ತನಿಖೆ ನಡೆಯುತ್ತಿರುವಾಗ ಏನೂ ಹೇಳಲು ಆಗಲ್ಲ ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ವಿಧಾನಸಭೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಈ ಚರ್ಚೆಯ ವೇಳೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪರಮೇಶ್ವರ್,ಧರ್ಮಸ್ಥಳ ಪ್ರಕರಣದ ಬಗ್ಗೆ ಇಂದು ಇಡೀ ದೇಶ ಗಮನಿಸುತ್ತಿದೆ. ಧರ್ಮಸ್ಥಳ ಠಾಣೆಗೆ ಹೋಗಿ ಓರ್ವ ದೂರು ಕೊಟ್ಟಿದ್ದ. ನನಗೆ ನಿರಂತರ ಜೀವ ಬೆದರಿಕೆವೊಡ್ಡಿ ಶವ ಹೂತಿದ್ದ ಬಗ್ಗೆ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಅಪರಿಚಿತ ದೂರು ಕೊಟ್ಟಿದ್ದ. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಸಹ ಕೇಳಿದ್ದ,ಈ ಹಿನ್ನಲೆಯಲ್ಲಿ ಪೊಲೀಸರು ನ್ಯಾಯಾಧೀಶರ ಮುಂದೆ ಆತನನ್ನು ಹಾಜರುಪಡಿಸಿ 164ರಡಿ ಹೇಳಿಕೆ ದಾಖಲಿಸಿದ್ದರು. ಬಳಿಕ ನ್ಯಾಯಾಧೀಶರು ತನಿಖೆಗೆ ಸೂಚಿಸಿದ್ದರು. ನ್ಯಾಯಾಧೀಶರ ಸೂಚನೆಯಂತೆ ಪೊಲೀಸರು ತನಿಖೆ ಕೈಗೊಂಡಿದ್ದರು. ಆ ನಂತರ ಎಸ್ಐಟಿ ರಚಿಸುವಂತೆ ಮಹಿಳಾ ಆಯೋಗ ಪತ್ರ ಬರೆದಿತ್ತು. ಎಸ್ಐಟಿ ಏಕೆ ರಚಿಸಬೇಕೆಂದೂ ಮಹಿಳಾ ಆಯೋಗ ಪತ್ರದಲ್ಲಿ ಉಲ್ಲೇಖಿಸಿತ್ತು ಎಂದರು.

ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ಬಗ್ಗೆ ಎಸ್ಐಟಿ ರಚಿಸಲು ಮಹಿಳಾ ಆಯೋಗ ಕೋರಿತ್ತು. ಇದಾದ ಬಳಿಕ ನಾನು, ಮುಖ್ಯಮಂತ್ರಿ ಸಿದ್ಧರಾಮಯ್ಯ ಎಸ್ಐಟಿ ರಚನೆಗೆ ಆದೇಶ ನೀಡಿದ್ದೆವು. ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿತ್ತು ಎಂಬುದಾಗಿ ಸದನಕ್ಕೆ ಗೃಹ ಸಚಿವ ಪರಮೇಶ್ವರ್ ಉತ್ತರಿಸಿದರು.

ಉತ್ಖನನಕ್ಕೂ ಮುನ್ನ ಅಪರಿಚಿತನಿಂದ ಎಸ್ಐಟಿ ಹೇಳಿಕೆ ಪಡೆದಿತ್ತು. ಅಪರಿಚಿತನಿಂದ ಹೇಳಿಕೆ ಪಡೆದ ಬಳಿಕ ಮ್ಯಾಪಿಂಗ್ ಮಾಡಲಾಗಿತ್ತು. ಉತ್ಖನನ ನಡೆಸಿದ ಪೈಕಿ ಎರಡು ಜಾಗದಲ್ಲಿ ಅಸ್ಥಿಪಂಜರ, ಮೂಳೆ, ಬುರುಡೆ ಪತ್ತೆಯಾಗಿದೆ. ಒಂದು ಜಾಗದಲ್ಲಿ ಅಸ್ಥಿಪಂಜರ ಸಿಗುತ್ತೆ, ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ಮತ್ತೊಂದು ಜಾಗದಲ್ಲಿ ಮೂಳೆ, ಬುರುಡೆ ಪತ್ತೆಯಾಗಿದ್ದವು. ಮೂಳೆ ಹಾಗೂ ಬುರುಡೆಗಳನ್ನು ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ಇನ್ನೂ ತನಿಖೆಯೇ ಆರಂಭವಾಗಿಲ್ಲ ಎಂದರು.

ಅಪರಿಚಿತ ಸೂಚಿಸಿದ ಜಾಗದಲ್ಲಿ ಉತ್ಖನನ ನಡೆಸಲಾಗಿದೆ. ಉತ್ಖನನ ನಡೆಸಿ ಸಿಕ್ಕ ಅಸ್ಥಿಪಂಜರ, ಮೂಳೆ, ಬುರುಡೆ, ಎಫ್ಎಸ್ಎಲ್ ಗೆ ರವಾನಿಸಿದ್ದೇವೆ. ಇನ್ನೂ ತನಿಖೆ ನಡೆಸಬೇಕಿದೆ. ಸಿಕ್ಕ ಮೂಳೆಗಳ ಬಗ್ಗೆ, ಸಾಯಿಲ್ ಬಗ್ಗೆ ತನಿಖೆ ನಡೆಸಬೇಕಿದೆ. ನಾವು ಯಾವುದೇ ಒತ್ತಡಕ್ಕೆ ಮಣಿದು ಎಸ್ಐಟಿ ರಚಿಸಿಲ್ಲ. ಯಾವುದೇ ಕಾರಣಕ್ಕೂ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಸತ್ಯವನ್ನು ಹೊರ ತರುವುದೇ ನಮ್ಮ ಉದ್ದೇಶವಾಗಿದೆ. ಆತ ಹೇಳಿದ ಪ್ರತಿಯೊಂದು ವಿಚಾರವನ್ನು ತನಿಖೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *