ಕಾರ್ಕಳ : ಶಿರ್ಲಾಲು ಗ್ರಾಮದಲ್ಲಿ ಕಾಡಾನೆ ಸಂಚಾರವು ಗ್ರಾಮಸ್ಥರ ನಿದ್ದೆಗೆಡಿಸಿದೆ. ಕಳೆದ ಒಂದು ವಾರದಿಂದ ಒಂಟಿ ಸಲಗವು ಸಿಕ್ಕ ಸಿಕ್ಕ ಕೃಷಿ ಬೆಳೆಗಳನ್ನು ನಾಶ ಮಾಡಿ ದಾಂಧಲೆ ನಡೆಸುತ್ತಿದ್ದು, ಜನರು ಮನೆಯಿಂದ ಹೊರಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಕಾಡಾನೆಗಳ ಗುಂಪಿನಿಂದ ಬೇರ್ಪಟ್ಟ ಸಲಗವು ಶಿರ್ಲಾಲಿನ ಹಾಡಿಯಂಗಡಿ ಆಯರೆಮನೆ
ಧರ್ಮರಾಜ್ ಹೆಗ್ಡೆ ಅವರ ತೋಟಕ್ಕೆ ಮೇ 27ರ ರಾತ್ರಿ ದಾಳಿ ನಡೆಸಿ ಅಡಿಕೆ, ಕಾಳು ಮೆಣಸು ಸೇರಿದಂತೆ ಅಪಾರ ಕೃಷಿ ನಾಶ ಮಾಡಿತ್ತು .ಹಗಲಿನಲ್ಲಿ ಕಾಡು ಸೇರುವ ಆನೆ ಕತ್ತಲಾದ ಬಳಿಕ ಮತ್ತೆ ಗ್ರಾಮಕ್ಕೆ ಎಂಟ್ರಿ ಕೊಟ್ಟು ದಾಂಧಲೆ ನಡೆಸಿದೆ.
ಗುರುವಾರ ತಡರಾತ್ರಿ ಶಿರ್ಲಾಲು ಬೈಲುಮನೆ ಸುಂದರ್ ನಾಯ್ಕ ಅವರ ತೋಟಕ್ಕೆ ದಾಳಿ ಮಾಡಿ ಅಡಿಕೆ, ಬಾಳೆ ಹಾಗೂ ಇನ್ನಿತರ ಬೆಳೆ ನಾಶ ಮಾಡಿದೆ.
ಈ ಭಾಗದ ಕೃಷಿಕರು ಕಾಡುಪ್ರಾಣಿಗಳ ಹಾವಳಿಯಿಂದ ಹೈರಾಣಾಗಿದ್ದು,ಇದೀಗ ಕಾಡಾನೆ ದಾಳಿಯಿಂದ ಅಕ್ಷರಶಃ ಕಂಗಾಲಾಗಿದ್ದಾರೆ. ಕಾಡಂಚಿನ ಗ್ರಾಮದ ಮನೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವ ಸ್ಥಿತಿ ಎದುರಾಗಿದೆ.
ಕಾಡಾನೆಯನ್ನು ಮರಳಿ ಕಾಡಿಗಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಗೆ ಮುಂದಾಗಿದ್ದು, ಡಿಎಫ್ಓ, ಎಸಿಎಫ್ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.