ಕಾರ್ಕಳ: ಕಾರ್ಕಳ ತಾಲೂಕಿನ ಎರ್ಲಪಾಡಿಯಲ್ಲಿ ಸ್ಪೀಡ್ ಪೋಸ್ಟ್ ವಿಚಾರದಲ್ಲಿ ಅಂಚೆಪಾಲಕನಿಗೆ(ಪೋಸ್ಟ್ಮ್ಯಾನ್) ಹಲ್ಲೆ ನಡೆಸಿರುವ ಘಟನೆ ಆ.28ರಂದು ನಡೆದಿದೆ.
ಮೂಲತಃ ಕೊಪ್ಪಳದ ಮಲ್ಲಿಕಾರ್ಜುನ ಅವರು ಕಳೆದ 10 ತಿಂಗಳಿನಿAದ ಎರ್ಲಪಾಡಿಯಲ್ಲಿ ಪೋಸ್ಟ್ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಆ.28 ರಂದು ಯರ್ಲಪಾಡಿ ಗ್ರಾಮದ ರಾಜೇಶ್ ಎಂಬುವವರಿಗೆ ಸ್ಪೀಡ್ ಪೋಸ್ಟ್ ಇದ್ದು ಸಂಜೆ 4.45ಕ್ಕೆ ಪೋಸ್ಟ್ಮ್ಯಾನ್ ಮಲ್ಲಿಕಾರ್ಜುನ ಅವರು ರಾಜೇಶ್ ರಿಗೆ ಕರೆ ಮಾಡಿದಾಗ ಅವರು ಬೈಲೂರಿಗೆ ಬರಲು ತಿಳಿಸಿದ್ದು, ಬೈಲೂರಿಗೆ ಹೋಗಿ ಕರೆ ಮಾಡಿದಾಗ ರಾಜೇಶ್ ರವರು ಪೋನ್ ತೆಗೆಯದ ಕಾರಣ ರೂಮಿಗೆ ವಾಪಾಸಾಗಿದ್ದರು.
ಸಂಜೆ ರಾಜೇಶ್ ಕರೆ ಮಾಡಿ ಗೋವಿಂದೂರಿಗೆ ಬರಲು ಹೇಳಿದ್ದು ಮಲ್ಲಿಕಾರ್ಜುನ ಅವರು ಈಗ ಮಳೆ ಬರುತ್ತಿದೆ ಪೋಸ್ಟ್ ನಾಳೆ ಕೊಡುತ್ತೇನೆಂದು ಹೇಳಿದಾಗ ಆತ ಅರ್ಜೆಂಟ್ ಇದೆ ಈಗಲೇ ಬೇಕು ಎಂದು ಹೇಳಿದ್ದಕ್ಕೆ ಮಲ್ಲಿಕಾರ್ಜುನ ಗೋವಿಂದೂರು ಸುಧಾಕರ ರವರ ಅಂಗಡಿ ಬಳಿ ಹೋದಾಗ ರಾಜೇಶ ಸ್ಪೀಡ್ ಪೋಸ್ಟನ್ನು ಪಡೆದು ಇದು ಯಾವಾಗ ಬಂದಿದೆ ಎಂದು ಕೇಳಿದಾಗ ಈ ದಿನ ಬಂದಿರುತ್ತದೆ ಎಂದು ಮಲ್ಲಿಕಾರ್ಜುನ ಹೇಳಿದ್ದಕ್ಕೆ ರಾಜೇಶ್ ಇದು ಬಂದು ಮೂರು ದಿನ ಆಗಿರುತ್ತದೆ ನನಗೆ ಮೆಸೇಜ್ ಬಂದಿದೆ ನೀನು ಸುಳ್ಳು ಹೇಳುತ್ತೀಯ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೆನ್ನೆಗೆ ಹೊಡೆದು ಅಲ್ಲಿಂದ ಹೋಗದಂತೆ ಕಾಲರ್ ಹಿಡಿದು ತಡೆದು ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಮಲ್ಲಿಕಾರ್ಜುನ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ದೂರು ನೀಡಿದ್ದು, ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
`