ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿರುವ ಆರೋಪಿಗಳು ಶವ ವಿಲೇವಾರಿಗೆ 30 ಲಕ್ಷ ರೂ. ಪಡೆದಿದ್ದರೆಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ರೇಣುಕಾಸ್ವಾಮಿ ಕೊಲೆಯಾದ ಬಳಿಕ ಮೃತದೇಹ ವಿಲೇವಾರಿಗೆ 30 ಲಕ್ಷ ರೂ. ಡೀಲ್ ಪಡೆದುಕೊಂಡಿದ್ದ ಗ್ಯಾಂಗ್, ರಾತ್ರಿಯಿಡಿ ದರ್ಶನ್ ಜೊತೆಗೆ ವಾಟ್ಸಪ್ ಕಾಲ್ ನಲ್ಲಿ ಸಂಪರ್ಕದಲ್ಲಿದ್ದರು. ಬಳಿಕ ಶವ ಪತ್ತೆಯಾಗುತ್ತಿದ್ದಂತೆ ಪೊಲೀಸರಿಗೆ ಶರಣಾಗುವಂತೆ ದರ್ಶನ್ ಸೂಚನೆ ನೀಡಿದ್ದರು ಎನ್ನಲಾಗಿದೆ. ಬಳಿಕ ಅನುಮಾನಗೊಂಡ ಪೊಲೀಸರು ತಮ್ಮದೇ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ A-1 ಆರೋಪಿಯಾಗಿರುವ ಪವಿತ್ರಾಗೌಡರನ್ನು ಮಹಿಳಾ ಸಾಂತ್ವನ ಕೇಂದ್ರದಿಂದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿದ್ದು, ಪವಿತ್ರ ಅವರ ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಂಬಂಧ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಮತ್ತು ಸಹಚರರು ಪೊಲೀಸ್ ಕಸ್ಟಡಿಯಲ್ಲಿ ರಾತ್ರಿ ಕಳೆದಿದ್ದಾರೆ. ರಾತ್ರಿ ನಟ ದರ್ಶನ್ ಮತ್ತು ಸಹಚರರಿಗೆ ಬೆಡ್ ಶೀಟ್, ಕಾರ್ಪೇಟ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ತಲೆನೋವು, ಮೈ-ಕೈ ನೋವಿಗೆ ಡೋಲೋ -೬೫೦ ಮಾತ್ರೆ ತರಿಸಿದ್ದರು. ಬಂಧನದಿಂದಾಗಿ ನಟ ದರ್ಶನ್ ಚಿಂತಾಕ್ರಾಂತರಾಗಿದ್ದು, ರಾತ್ರಿ ನಿದ್ದೆ ಮಾಡದೇ ಎದ್ದು ಕುಳಿತಿದ್ದರು ಎನ್ನಲಾಗಿದೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯ ಮುಂದೆ ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.











