
ಬೆಂಗಳೂರು,ಜ.22: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಸೌಧಕ್ಕೆ ಆಗಮಿಸಿದ್ದು, ವಿಶೇಷ ಅಧಿವೇಶನದಲ್ಲಿ ಸರ್ಕಾರ ಸಿದ್ದಪಡಿಸಿದ್ದ ಭಾಷಣ ಓದದೇ ಕೇವಲ ಶುಭಾಶಯಗಳನ್ನು ತಿಳಿಸಿ ನಿರ್ಗಮಿಸುವ ಮೂಲಕ ವಿಧಾನಮಂಡಲದ ಅಧಿವೇಶನದಲ್ಲಿ ಭಾರೀ ಹೈಡ್ರಾಮಾ ನಡೆಯಿತು.
ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೇವಲ 2 ನಿಮಿಷದ ಭಾಷಣ ಮಾಡಿದ್ದು, ಆರ್ಥಿಕ ಸ್ಥಿತಿಗತಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ನನ್ನ ಸರ್ಕಾರ ಬದ್ಧವಾಗಿದೆ. ಅವರಿಗೆ ನನ್ನ ಶುಭಾಶಯ, ಜೈ ಹಿಂದ್, ಜೈಕರ್ನಾಟಕ ಎಂದು ರಾಜ್ಯಪಾಲರು ಭಾಷಣ ಮುಗಿಸಿದ್ದಾರೆ. ಈ ಮೂಲಕ ಸರ್ಕಾರ ಕೊಟ್ಟ ಭಾಷಣ ಓದದೇ ಕೆಲ ಅಂಶಗಳನ್ನು ಮಾತ್ರ ಓದಿ ಭಾಷಣ ಮುಗಿಸಿದ್ದಾರೆ.
ಇತ್ತ ಚುಟುಕು ಭಾಷಣ ಮುಗಿಸಿ ಸಭಾಧ್ಯಕ್ಷರ ಪೀಠದಿಂದ ಹೊರಟ ರಾಜ್ಯಪಾಲರನ್ನು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ತಡೆದು ಸರ್ಕಾರದ ಭಾಷಣ ಓದುವಂತೆ ಪಟ್ಟು ಹಿಡಿದ ಘಟನೆಯೂ ನಡೆಯಿತು. ರಾಜ್ಯಪಾಲರು ಸದನದಿಂದ ಹೊರನಡೆಯುತ್ತಿದ್ದಂತೆ ಅವರ ವಿರುದ್ಧ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಯು.ಟಿ ಖಾದರ್ ಅವರು ರಾಜ್ಯಪಾಲರನ್ನು ಬೀಳ್ಕೊಟ್ಟರು.
ಈ ಕುರಿತು ಮಾಧ್ಯಮದವರ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಸಂವಿಧಾನದ ಆರ್ಟಿಕಲ್ 176 ಹಾಗೂ 163ನೇ ವಿಧಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ರಾಜ್ಯಪಾಲರು ತಾವೇ ಸಿದ್ದಪಡಿಸಿದ ಭಾಷಣ ಓದುವಂತಿಲ್ಲ.ಕ್ಯಾಬಿನೆಟ್ ಸಿದ್ದಪಡಿಸಿದ ಭಾಷಣವನ್ನೇ ಓದಬೇಕು. ಆದರೆ ರಾಜ್ಯಪಾಲರ ನಡೆ ಸಂವಿಧಾನ ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಲ್ಲದೇ ನಾವು ಮನರೇಗಾ ಕಾಯಿದೆ ಮರುಜಾರಿಗೊಳಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದರು.

.
.
.
.
