ಬೆಂಗಳೂರು: ಕರ್ನಾಟಕದಲ್ಲಿ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಹಲವು ಗಡುವುಗಳನ್ನು ನೀಡಿದರೂ ಬಹುತೇಕ ವಾಹನ ಮಾಲೀಕರು ಇನ್ನೂ ಅಳವಡಿಸಿಲ್ಲ. ಇದೀಗ ರಾಜ್ಯ ಸರ್ಕಾರ ಇನ್ನೂ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸದವರಿಗೆ ಬಿಗ್ ರಿಲೀಫ್ ನೀಡಿದೆ. ಜೂನ್ 12ರ ಗುಡುವು ಅಂತ್ಯಗೊಂಡ ಬೆನ್ನಲ್ಲೇ ಜುಲೈ 4ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಮಹತ್ವದ ಸಭೆ ನಡೆಸಿ ಇದೀಗ ಅಂತಿಮ ಗಡುವನ್ನು ಸೆಪ್ಟೆಂಬರ್ 15ರ ವರೆಗೆ ವಿಸ್ತರಿಸಲಾಗಿದೆ.
ರಾಜ್ಯದ ಸರ್ಕಾರದ ನೂತನ ಆದೇಶದ ಪ್ರಕಾರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸೆಪ್ಟೆಂಬರ್ 15ರ ವರೆಗೆ ಅವಕಾಶವಿದೆ. ಸೆಪ್ಟೆಂಬರ್ 16ರಿಂದ ದುಬಾರಿ ದಂಡ ವಿಧಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಈಗಾಗಲೇ ಹಲವು ಬಾರಿ ಗಡುವು ವಿಸ್ತರಣೆ ಮಾಡಿದ್ದೇವೆ. ಆದರೂ ಹಲವು ವಾಹನಗಳು ಇನ್ನೂ ನಂಬರ್ ಪ್ಲೇಟ್ ಅಳವಡಿಸಿಲ್ಲ. ಹೆಚ್ಚಿನ ಸಂಖ್ಯೆಯ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಬಾಕಿ ಇರುವ ಕಾರಣ ಇದೀಗ ಕೊನೆಯದಾಗಿ ಗಡುವು ವಿಸ್ತರಿಸಲಾಗುತ್ತಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಜೂನ್ 12ಕ್ಕೆ ಗಡುವು ಅಂತ್ಯಗೊಂಡಿದ್ದ ಕಾರಣ ಜುಲೈ 4ರ ವರೆಗೆ ಗಡುವು ವಿಸ್ತರಿಸಲಾಗಿತ್ತು. ಇದಕ್ಕೂ ಮುನ್ನ ಬಿಎನ್ಡಿ ಎನರ್ಜಿ ಲಿಮಿಟೆಡ್ ಸೇರಿದಂತೆ ಕೆಲ ಸಂಸ್ಥೆಗಳು , ಸಾರ್ವಜನಿಕರು ಹೈಕೋರ್ಟ್ ಮೊರೆ ಹೋಗಿದ್ದರು. ಗಡುವು ವಿಸ್ತರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಈ ಹಿಂದಿನ ಆದೇಶಕ್ಕೆ ತಿದ್ದುಪಡಿ ತಂದು ಗಡುವು ವಿಸ್ತರಣೆಗೆ ಅವಕಾಶ ನೀಡಿತ್ತು. ಹೈಕೋರ್ಟ್ ಸೂಚನೆ ಬಳಿಕ ಸಭೆ ನಡೆಸಿದ ಸರ್ಕಾರ ಇದೀಗ ಸೆಪ್ಟೆಂಬರ್ 15ರ ವರೆಗೆ ವಿಸ್ತರಿಸಿದೆ.
ಎಚ್ಎಸ್ಆರ್ಪಿ ಅಳವಡಿಕೆಗೆ ಸರ್ಕಾರ ಮೇ 31ರ ಗಡುವು ವಿಧಿಸಿತ್ತು. ಆದರೆ, ಎಚ್ಎಸ್ಆರ್ಪಿ ಅಳವಡಿಕೆ ವಿಚಾರದಲ್ಲಿ ಜೂ.12ರವರೆಗೆ ಬಲವಂತದ ಕ್ರಮ ಅಥವಾ ಯಾವುದೇ ನಿರ್ಧಾರ ಕೈಗೊಳ್ಳದಂತೆ ಮೇ 21ರಂದು ಹೈಕೋರ್ಟ್ ರಜಾಕಾಲದ ಪೀಠ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ, ಗಡುವು ವಿಸ್ತರಿಸಿ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಆಗಸ್ಟ್ ಅಥವಾ ಸೆಪ್ಟೆಂಬರ್ವರೆಗೆ ಗಡುವು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ, ಮೇ 21ರ ಆದೇಶದಲ್ಲಿ ಮಾರ್ಪಾಡು ಮಾಡಬೇಕು. ನ್ಯಾಯಪೀಠ ಅನುಮತಿಸಿದರೆ ಒಂದು ವಾರದಲ್ಲಿ ಗಡುವು ವಿಸ್ತರಿಸಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೈಕೋರ್ಟ್ಗೆ ಹೇಳಿತ್ತು. ಇದಕ್ಕೆ ಹೈಕೋರ್ಟ್ ಸಮ್ಮತಿಸಿತ್ತು.