ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯ ಇಂದಿರಾ ಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿನ ಅಂಗಡಿ ಕೋಣೆಗಳನ್ನು ಮರು ಏಲಂ ಮಾಡಲು ಪುರಸಭೆ ಈಗಾಗಲೇ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು,ಈ ಏಲಂ ಪ್ರಕ್ರಿಯೆ ಕುರಿತು ನ್ಯಾಯಾಲಯವು ಸುರೇಂದ್ರ ಹಾಗೂ ಇತರರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರವಾಗಿ ಮಧ್ಯಂತರ ಆದೇಶವನ್ನು ಹೊರಡಿಸಿದ್ದು ಪ್ರಸಕ್ತ ಅಂಗಡಿಯ ಬಾಡಿಗೆದಾರರನ್ನು ಮುಂದಿನ ಆದೇಶದವರೆಗೆ ಒಕ್ಕಲೆಬ್ಬಿಸಬಾರದೆಂದು ಮಧ್ಯಂತರ ಆದೇಶ ಮಾಡಿದೆ.ಇದರಿಂದ ಏಲಂ ಪ್ರಕ್ರಿಯೆಯೇ ರದ್ದಾಗುವ ಸಾಧ್ಯತೆ ದಟ್ಟವಾಗಿದೆ.
ಕಾರ್ಕಳ ಪುರಸಭೆ ಮಾರುಕಟ್ಟೆ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸುವರು, ಪ್ರಸಕ್ತ ಬಾಡಿಗೆದಾರರು ಅಂಗಡಿ ಕಟ್ಟೋಣಗಳನ್ನು ಪುರಸಭೆಗೆ ಒಪ್ಪಿಸದೇ ಇದ್ದಲ್ಲಿ ಮತ್ತು ಕಾನೂನು ಪ್ರಕ್ರಿಯೆ ಕೈಗೊಂಡು ಒಕ್ಕಲು ಎಬ್ಬಿಸಿದ ನಂತರವೇ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆ ? ಎಂದು ಬಿಡ್ಡುದಾರರು ಗೊಂದಲಕ್ಕೆ ಒಳಗಾಗಿದ್ದಾರೆ.ಇದೀಗ ಹಾಲಿ ಬಾಡಿಗೆದಾರರು ಹೈಕೋರ್ಟ್ ಆದೇಶದಿಂದ ಸಧ್ಯಕ್ಕೆ ನಿರಾಳರಾಗಿದ್ದಾರೆ.
ಆದರೆ ಹೈಕೋರ್ಟ್ ನ ಮುಂದಿನ ಆದೇಶದವರೆಗೆ ಪುರಸಭೆ ನಿಗದಿತ ದಿನಾಂಕದಂದು ಏಲಂ ಪ್ರಕ್ರಿಯೆ ನಡೆಸಿದರೂ ಬಿಡ್ದುದಾರರು ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕಬಹುದು. ಯಾಕೆಂದರೆ ಹೈಕೋರ್ಟ್ ಒಂದೊಮ್ಮೆ ಮರು ಏಲಂ ಪ್ರಕ್ರಿಯೆಯನ್ನೇ ರದ್ದುಪಡಿಸಿದರೆ ಯಶಸ್ವಿ ಬಿಡ್ಡುದಾರರು ತಾವು ಸರ್ಕಾರಕ್ಕೆ ಪಾವತಿಸಿರುವ ಲಕ್ಷಾಂತರ ರೂ ಹಣ ಹಿಂಪಡೆಯಲು ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದಲ್ಲದೇ ಏಲಂ ಪ್ರಕ್ರಿಯೆಗಳು ಹೈಕೋರ್ಟಿನ ಅಂತಿಮ ಆದೇಶಕ್ಕೆ ಒಳಪಟ್ಟು ನಡೆಸಬೇಕೆಂದು ತನ್ನ ಆದೇಶದಲ್ಲಿ ತಿಳಿಸಿರುವ ಹಿನ್ನೆಲೆಯಲ್ಲಿ ಹೈಕೋರ್ಟಿನ ಮುಂದಿನ ಆದೇಶದವರೆಗೆ ಪುರಸಭೆ ಏಲಂ ಪ್ರಕ್ರಿಯೆ ನಡೆಸುವುದು ಅನುಮಾನ ಎನ್ನಲಾಗಿದೆ.