ಕಾರ್ಕಳ:ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ), ಸ್ವಚ್ಛ ಕಾರ್ಕಳ ಬ್ರಿಗೇಡ್ ಕಾರ್ಕಳ, ಶ್ರೀ ಭುವನೇಂದ್ರ ರೆಸಿಡೆನ್ಷಿಯಲ್ ಸ್ಕೂಲ್, ಕಾರ್ಕಳ ಇವರ ಸಯುಂಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಸಂರಕ್ಷಣಾ ಕಾನೂನುಗಳ ಬಗ್ಗೆ ಅರಿವು ಕಾರ್ಯಕ್ರಮವು ಭುವನೇಂದ್ರ ರೆಸಿಡೆನ್ಷಿಯಲ್ ಶಾಲೆಯಲ್ಲಿ ಜೂ.06ರಂದು ಬುಧವಾರ ಜರುಗಿತು.
ಸಮಾರಂಭವನ್ನು ಕಾರ್ಕಳ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಧೀಶೆ ಶರ್ಮಿಳಾ ಸಿ.ಎಸ್ ರವರು, ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,ಭೂಮಿ ನಮಗೆ ಜೀವಿಸಲು ಸಿಕ್ಕಿರುವ ಕೊಡುಗೆ, ನಾವು ಪರಿಸವನ್ನು ಉಳಿಸಿದರೆ ಮಾತ್ರ ನಮಗೆ ಭೂಮಿಯಲ್ಲಿ ಬದುಕಲು ಸಾಧ್ಯ, ಸಾಧ್ಯವಾದಷ್ಟು ಹಸಿರು ಬೆಳೆಸಿ ಪರಿಸರ ರಕ್ಷಣೆಯ ಹೊಣೆ ನಮ್ಮ ಮೇಲಿದೆ ಎಂದರು.
ಕಾರ್ಕಳ ವಕೀಲ ಸಂಘದ ಅಧ್ಯಕ್ಷರ ಸುನಿಲ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಮನೆಯ ಆವರಣದಲ್ಲಿ ವರ್ಷಕ್ಕೆ ಒಂದು ಗಿಡವನ್ನು ನೆಟ್ಟು ಪೋಷಿಸಿಕೊಂಡು ಬರಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಯುವ ನ್ಯಾಯವಾದಿ ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸದಸ್ಯ ಎಂ.ಕೆ ವಿಪುಲ್ ತೇಜ್ ಮಾತನಾಡಿ, ಭಾರತದ ಸಂವಿಧಾನದಲ್ಲಿ ಪರಿಸರ ಸಂರಕ್ಷಣೆಗೆ ನೀಡಿದ ಆದ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಸಂವಾದ ರೂಪದಲ್ಲಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ ಶಾಲೆಯ ಸಂಚಾಲಕ ವೆಂಕಟೇಶ್ ಪ್ರಭು ರವರು ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸದಸ್ಯರಾದ ಮಾನಸ ಉಪಾಧ್ಯಾಯ ಮತ್ತು ಸಹನಾ ಶ್ರೀಶಾ ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲ ರಾಘವೇಂದ್ರ ಸಾಲ್ಯಾನ್ ಸ್ವಾಗತಿಸಿ ವಂದಿಸಿದರು.