Share this news

ಕಾರ್ಕಳ: ಇಂದಿನ ವಿದ್ಯಾರ್ಥಿಗಳೇ ನಾಳಿನ ಸತ್ಪ್ರಜೆಗಳು, ಸಂಸ್ಕಾರವಂತ ಜೀವನ ಧರ್ಮದೊಂದಿಗೆ ವಿನಯವಂತ ಗುಣನಡತೆಗಳನ್ನೂ ಮೈಗೂಡಿಸಿಕೊಂಡು ಮುನ್ನಡೆಯುವಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರವಂತ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡಬೇಕು.ಕೇವಲ ಪುಸ್ತಕದ ಹುಳುಗಳಾದರೆ ಸಾಲದು ಜ್ಞಾನದ ಹಸಿವಿನೊಂದಿಗೆ ವ್ಯಕ್ತಿತ್ವ ವಿಕಸನಕ್ಕೂ ಒತ್ತು ನೀಡಬೇಕು, ಬೆಂಬಲವಾಗಿ ಶಿಕ್ಷಣ ಸಂಸ್ಥೆ ಹಾಗೂ ಪೋಷಕರೆಲ್ಲರೂ ಜವಾಬ್ದಾರರಾಗಿ ನಡೆದುಕೊಳ್ಳಬೇಕು ಎಂದು ಕವಿಯತ್ರಿ,ಸಾಹಿತಿ ಹಾಗೂ ಪತ್ರಕರ್ತೆ ರೇಶ್ಮಾ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ಎಣ್ಣೆಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,ಪ್ರಾರಂಭೋತ್ಸವ ವಿದ್ಯೆಯೊಂದಿಗೇ ನಿತ್ಯ ಆನಂದೋತ್ಸವವಾಗಿ ವಿದ್ಯಾರ್ಥಿಗಳ ಬಾಳಲ್ಲಿ ಸಂತಸ ನೀಡಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮರ್ಣೆ ಪಂಚಾಯತ್ ಸದಸ್ಯ ರಾಜೇಶ್ ಶೆಟ್ಟಿ ಮಾತನಾಡಿ, ನಮ್ಮೂರ ಶಾಲೆಗೆ ವಿಶೇಷ ನವೀನ ತಂತ್ರಜ್ಞಾನ ಅಳವಡಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಕೌಶಲ್ಯ ತರಗತಿಗಳನ್ನು ಆಯೋಜನೆ ಮಾಡುವ ನಿಟ್ಟಿನಲ್ಲಿ ಪ್ರಾರಂಭದ ದಿನದಿಂದಲೇ ಸಕಲ ಸಿದ್ಧತೆಗಳನ್ನು ನೆರವೇರಿಸಿಕೊಂಡಿದ್ದೇವೆ, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಕೊರತೆಯಿಲ್ಲದೇ ಶಿಕ್ಷಣ ಪಡೆಯುವಲ್ಲಿ ಸಹಕಾರವನ್ನು ಖಂಡಿತ ನೀಡುತ್ತೇವೆ ಎಂದು ಭರವಸೆ ನೀಡಿದರು.

ಎಸ್ ಡಿ ಎಂ ಸಿ ಅಧ್ಯಕ್ಷೆ ಪ್ರತಿಮಾ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಶಾಲೆಯ ಮೇಲೆ ವಿಶೇಷ ಪ್ರೀತಿ ಅಭಿಮಾನ ಹೊಂದಿ ಮಕ್ಕಳನ್ನು ಇದೇ ಶಾಲೆಗೆ ಸೇರಿಸಿ ಗ್ರಾಮೀಣ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಪೋಷಕರು ಸಹಕರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷ ರವಿಪ್ರಕಾಶ್ ನಾಯಕ್ ಮುಖ್ಯೋಪಾಧ್ಯಾಯಿನಿ ಅರುಂಧತಿ, ಶಿಕ್ಷಕಿ ಭಾರತಿ ,ಆಶಾ ಶೆಟ್ಟಿ, ಸದಾನಂದ ಬೇಗಾರ್ ,ಹಳೆ ವಿದ್ಯಾರ್ಥಿಗಳಾದ ಶರತ್ ಶೆಟ್ಟಿ ಕೀರ್ತನ್ , ಹಾಗೂ ಪೋಷಕರು ಶಿಕ್ಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.

ಈ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಶಾಂತಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಿದ್ದರು.
ಶಿಕ್ಷಕಿ ಭಾರತಿ ಅವರು ಸ್ವಾಗತಿಸಿ, ಸುಶ್ಮಿತಾ ಅವರು ವಂದಿಸಿದರು. ಶಿಕ್ಷಕ ಸದಾನಂದ್ ಕೆಬಿ ಕಾರ್ಯಕ್ರಮ ನಿರೂಪಿಸಿದರು.

 

 

 

                        

                          

 

 

 

 

 

                        

                          

 

Leave a Reply

Your email address will not be published. Required fields are marked *