ಬೆಂಗಳೂರು : ಸರ್ಕಾರಿ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡವರಿಗೆ ರಾಜ್ಯ ಸರ್ಕಾರ ಬಿಸಿಮುಟ್ಟಿಸಲು ಮುಂದಾಗಿದ್ದು, ಸರ್ಕಾರಿ ಜಮೀನುಗಳನ್ನು ರಕ್ಷಿಸಲು ಕಂದಾಯ ಇಲಾಖೆಯು ಲ್ಯಾಂಡ್ ಬೀಟ್ ಪ್ರೋಗಾಂಗೆ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡ ಸಚಿವರು, ಸರ್ಕಾರಿ ಜಮೀನುಗಳನ್ನು ರಕ್ಷಿಸಲು ನಮ್ಮ ಇಲಾಖೆಯು ಮಹತ್ವದ ‘ಲ್ಯಾಂಡ್ ಬೀಟ್ ಪ್ರೋಗ್ರಾಂಗೆ’ ಚಾಲನೆ ನೀಡಿದೆ. ಕಂದಾಯ ಇಲಾಖೆಯ 14 ಲಕ್ಷ ಸರ್ಕಾರಿ ಆಸ್ತಿಗಳ ಡಿಜಿಟಲ್ ದಾಖಲೆಗಳನ್ನೊಳಗೊಂಡ (ಸರ್ವೆ ಸಂಖ್ಯೆ, ಭೌಗೋಳಿಕ ಗಡಿ ಸೇರಿದಂತೆ) ಆಪ್ ಅಭಿವೃದ್ಧಿಪಡಿಸಿದ್ದೇವೆ. ಜಿಪಿಎಸ್ ಬಳಸಿಕೊಂಡು ಪ್ರತೀ ಆಸ್ತಿಯನ್ನು ಅಪ್ಲಿಕೇಶನ್ನಲ್ಲಿ ಮ್ಯಾಪ್ ಮಾಡಲಾಗುತ್ತದೆ. ಒತ್ತುವರಿ ಪರಿಶೀಲಿಸಲು ನಮ್ಮ ಅಧಿಕಾರಿಗಳು ಪ್ರತೀ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಯಾವುದೇ ಸಮಸ್ಯೆಗಳನ್ನು ನೇರವಾಗಿ ಅಪ್ಲಿಕೇಶನ್ ಮೂಲಕ ವರದಿ ಮಾಡುತ್ತಾರೆ. ನಂತರ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈವರೆಗೆ ಗ್ರಾಮ ಆಡಳಿತ ಅಧಿಕಾರಿಗಳು 5,90,000 ಕ್ಕೂ ಹೆಚ್ಚು ಆಸ್ತಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಂದೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ. ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಇಲಾಖಾ ಅಧಿಕಾರಿಗಳ ಶ್ರಮದಿಂದ, ಪ್ರತೀ ಗ್ರಾಮಗಳ ಸರ್ಕಾರಿ ಆಸ್ತಿಗಳ ವಿವರವಾದ ಡಿಜಿಟಲ್ ದಾಖಲೆಗಳು ನಮ್ಮ ಬಳಿ ಇದೆ. ಈ ಆಸ್ತಿಗಳು ಸುರಕ್ಷಿತವಾಗಿರಲು ಆಗಾಗ್ಗೆ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. ಸರ್ಕಾರಿ ಜಮೀನುಗಳು ಒತ್ತುವರಿಯಾಗುವ ದೀರ್ಘಕಾಲದ ಸಮಸ್ಯೆಗೆ, ಈ ಪ್ರೋಗ್ರಾಂ ವ್ಯವಸ್ಥಿತ ಹಾಗೂ ವಿಶ್ವಾಸಾರ್ಹ ಪರಿಹಾರ ನೀಡುತ್ತದೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದರು.











