ಕಾರ್ಕಳ: ರಸ್ತೆಯಲ್ಲಿ ಸ್ಕೂಟರ್ ಚಲಿಸುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಬಾಗಿಲನ್ನು ಏಕಾಏಕಿ ತೆರೆದ ಪರಿಣಾಮ ಸ್ಕೂಟರ್ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೋಳ ನಿವಾಸಿ ಜಯ (59) ಎಂಬವರು ಅ.29 ರಂದು ಕಾರ್ಕಳ ಕಸಬಾ ಗ್ರಾಮದ ಮೂರು ಮಾರ್ಗದ ಕಡೆಯಿಂದ ಆನೆಕೆರೆ ಕಡೆಗೆ ಸ್ಕೂಟಿಯಲ್ಲಿ ಹೋಗುತ್ತಿರುವಾಗ, ಗಾಂಧಿಮೈದಾನ ಕ್ರಾಸ್ನಿಂದ ಸ್ವಲ್ಪ ಮುಂದೆ ಶೇಷಗಿರಿ ಎಂಬುವವರ ಮನೆಯ ಎದುರುಗಡೆ ರಸ್ತೆ ಎಡಬದಿ ನಿಲ್ಲಿಸಿದ್ದ ಕಾರಿನ ಚಾಲಕ ಜೋರ್ಜ್ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಗಮನಿಸದೇ ನಿರ್ಲಕ್ಷತನದಿಂದ ತನ್ನ ಕಾರಿನ ಬಲಬದಿಯ ಬಾಗಿಲನ್ನು ತೆರೆದಿದ್ದಾರೆ.
ಅದೇ ವೇಳೆ ಅಲ್ಲಿ ಚಲಿಸುತ್ತಿದ್ದ ಸ್ಕೂಟಿ ಸವಾರ ಜಯ ಅವರು ಸ್ಕೂಟಿ ಸಹಿತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಸ್ಪಂದನಾ ಅಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.