ಉಡುಪಿ: ಸಮಾಜ ಸುಧಾರಕ, ಸನಾತನ ಧರ್ಮದ ಪ್ರತಿಪಾದಕ ಶ್ರೀನಾರಾಯಣ ಗುರುಗಳನ್ನು ಸನಾತನ ಧರ್ಮದ ಶತ್ರು ಎಂದು ಬಿಂಬಿಸುವ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಾರಾಯಣ ಗುರುಗಳನ್ನು ಅವಮಾನಿಸಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಅವರ ಹೇಳಿಕೆ ದುರುದ್ದೇಶಪೂರಿತ ಮತ್ತು ಸಂಪೂರ್ಣ ಖಂಡನೀಯ. ತರ್ಕಬದ್ಧ ಚಿಂತನೆಯನ್ನು ಉತ್ತೇಜಿಸುವ ನೆಪದಲ್ಲಿ ಹಿಂದೂ ನಂಬಿಕೆಗಳನ್ನು ಅವರು ಅವಮಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸನಾತನ ಧರ್ಮವನ್ನು ದ್ವೇಷಿಸಬೇಕು ಎಂಬುದು ವಿಜಯನ್ ಅವರ ಶಿವಗಿರಿ ಸಮಾವೇಶದಲ್ಲಿ ಭಾಷಣದ ತಿರುಳು. ಅವರ ಹೇಳಿಕೆ ಹಿಂದೂಗಳನ್ನು ಘಾಸಿಗೊಳಿಸಿದೆ. ಅವರ ಮಾತುಗಳು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯ ಮುಂದುವರಿದ ಭಾಗದಂತಿದೆ. ಹಿಂದೂಗಳ ಮೇಲೆ ನಿರಂತರ ಧಾಳಿ, ದಬ್ಬಾಳಿಕೆ, ಕೊಲೆಯಂತಹ ಪೈಶಾಚಿಕ ಕೃತ್ಯ ನಡೆಸಿಕೊಂಡು ಹಿಂದೂಗಳ ಮೇಲಿನ ಅಕ್ರಮಣವನ್ನು ಪೋಷಿಸಿದ ಪ್ಯಾಶಿಸ್ಟ್ ಪಿಣರಾಯಿ ನೇತ್ರತ್ವದ ಕೇರಳ ಸರಕಾರ ಇದೀಗ ಹಿಂದೂ ಧರ್ಮ ಪ್ರತಿಪಾದಕರನ್ನು ನಿಂದಿಸಿ, ಧರ್ಮದ ಅವಹೇಳನಕ್ಕೆ ಮುಂದಾಗಿದೆ. ಹಿಂದೂ ಸಮಾಜ ಸುಧಾರಕರ ವಿರುದ್ಧ ಅಲ್ಲಿನ ಸರಕಾರ ಮಾತನಾಡಲು ಆರಂಭಿಸಿದೆ. ಕಮ್ಯುನಿಸ್ಟ್ ನ ಹಿಂದೂ ವಿರೋಧಿ ಇಂತಹ ದ್ವೇಷ ಪ್ರಚಾರವನ್ನು ಕೇರಳದ ಜನರು ತಿರಸ್ಕರಿಸಬೇಕು ಅಲ್ಲದೆ ಸಮಾಜ ಸುಧಾರಕರ ವಿರುದ್ಧ ಇಷ್ಟೊಂದು ಕೆಳ ಮಟ್ಟಕ್ಕೆ ಇಳಿದು ಸಾರ್ವಜನಿಕವಾಗಿ ಮಾತನಾಡಿದ ಕೇರಳ ಸಿಎಂ ವಿರುದ್ಧ ಸಮಸ್ತ ಹಿಂದೂಗಳು ತರಾಟೆಗೆ ತೆಗೆದುಕೊಂಡು ಸಿ.ಎಂ ವಿರುದ್ದ ಎದ್ದೇಳಬೇಕು. ಹಿಂದೂ ಧರ್ಮ ಪ್ರತಿಪಾದಕರ ಬಗ್ಗೆ ಬಾಲಿಶ ಹೇಳಿಕೆ ನೀಡುವ ಪಿಣರಾಯಿ ಅನ್ಯ ಧರ್ಮಧ ಧರ್ಮಗುರುಗಳ ಬಗ್ಗೆ ಇಂತಹ ಮಾತುಗಳನ್ನು ಹೇಳಲು ಸಿಎಂಗೆ ಧೈರ್ಯವಿದೆಯೇ ಎಂದು ಸವಾಲು ಹಾಕಿದ್ದಾರೆ.
ಈ ಹಿಂದೆ ಶಬರಿಮಲೆಯ ಅಯ್ಯಪ್ಪ ಸನ್ನಿಧಿಯಲ್ಲಿ ಹಿಂದೂಗಳ ನಂಬಿಕೆಗೆ ಸವಾಲು ಹಾಕಲು ಯತ್ನಿಸಿದ್ದ ಪಿಣರಾಯಿ ಇದೀಗ ನಾರಾಯಣ ಗುರುಗಳು ಸನಾತನ ಧರ್ಮದ ವಕ್ತಾರರೂ ಅಲ್ಲ, ಸಾಧಕರೂ ಅಲ್ಲ ಎಂದು ಪುಣ್ಯಭೂಮಿ ಶಿವಗಿರಿಯಲ್ಲಿ ಹೇಳಿ ಸನಾತನ ಧರ್ಮ ಮತ್ತು ಶ್ರೀ ನಾರಾಯಗಳ ಧಾರ್ಮಿಕ ಮೌಲ್ಯಗಳನ್ನು ತುಳಿಯುವ ನೀಚ, ಹೀನ ಕೃತ್ಯಕ್ಕೆ ಇಳಿದಿದೆ. ಇದು ಇಡೀ ಹಿಂದೂ ಸಮಾಜಕ್ಕೆ ಪಿಣರಯಿ ಮಾಡಿದ ಮಹಾದ್ರೋಹ ಕೇರಳ ಸಿಎಂ ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು ಎಂದುಸುನಿಲ್ ಕಿಡಿಕಾರಿದ್ದಾರೆ.