Share this news

 

ಕಾರ್ಕಳ, ಡಿ.28: ಶಿಕ್ಷಣ ಎನ್ನುವುದು ವ್ಯಾಪಾರಿಕರಣವಲ್ಲ ಅದು ಸೇವಾ ಮನೋಭಾವನೆಯ ಪರಿಕಲ್ಪನೆಯಾಗಿದೆ‌. ಶಿಕ್ಷಕರು ಮಕ್ಕಳ ವ್ಯಕ್ತಿತ್ವ ವಿಕಸನದ ರೂವಾರಿಗಳು, ಈ ನಿಟ್ಟಿನಲ್ಲಿ ಮಾಳದ ಗುರುಕುಲ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಜೀವನ ಮೌಲ್ಯ ಮತ್ತು ಸಂಸ್ಕಾರವನ್ನು ನೀಡುತ್ತಿರುವುದು ಮೂಲಕ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಮಾಳ ಗುರುಕುಲ ಅನುದಾನಿತ ಶಾಲೆಯ ಅಮೃತ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ,ಅನುದಾನಿತ ಹಾಗೂ ಸರ್ಕಾರಿ ಶಾಲೆಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿವೆ. ಶಿಕ್ಷಕರ ಕೊರತೆ, ವಿದ್ಯಾರ್ಥಿಗಳ ಕೊರತೆ, ಸರ್ಕಾರದ ನೀತಿ ನಿಯಮಾವಳಿಗಳ ನಡುವೆ ಶಾಲೆಗಳನ್ನು ಉಳಿಸಿಕೊಳ್ಳುವುದೇ ಸವಾಲಿನ ಸಂಗತಿಯಾಗಿದೆ. ಈ ಸವಾಲಿನ ನಡುವೆಯೂ ಮಾಳದ ಗುರುಕುಲ ಶಿಕ್ಷಣ ಸಂಸ್ಥೆಯು ಗುರುಕುಲ ಶಿಕ್ಷಣ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ನಮ್ಮ ಅವಿಭಜಿತ ಜಿಲ್ಲೆಗಳಲ್ಲಿ ಸರ್ಕಾರ ಕೊಟ್ಟ ಅನುದಾನಕ್ಕಿಂತ ಹೆಚ್ಚು ಸ್ಥಳೀಯ ದಾನಿಗಳ ಕೊಡುಗೆಗಳೇ ಹೆಚ್ಚು. ಬುದ್ದಿವಂತರ ಜಿಲ್ಲೆ ಎನಿಸಿಕೊಂಡಿರುವ ನಮ್ಮ ಜಿಲ್ಲೆಯ ಗುರುಕುಲದಂತಹ ಶಾಲೆಗಳಲ್ಲಿ ಕಲಿತು ಉನ್ನತ ಸ್ಥಾನಕ್ಕೆ ಏರಿದ್ದು ನಿಜಕ್ಕೂ ಹೆಮ್ಮೆಯ ವಿಚಾರ. ವ್ಯಕ್ತಿತ್ವ ನಿರ್ಮಾಣ ಮಾಡುವ ಕೆಲಸವನ್ನು ಗುರುಕುಲ ಶಾಲೆ ಮುಂದುವರಿಸಲಿ.
ಸಾಂಸ್ಕೃತಿಕವಾಗಿ ನಾವು ಗಟ್ಟಿಯಾದಾಗ ವ್ಯಕ್ತಿತ್ವ ವಿಕಸನದ ಮೂಲಕ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು .
ಮುಖ್ಯ ಅತಿಥಿಗಳಾಗಿ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಇದರ ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರಾದ ನವಕಾಂತ ಗೋರೆ ಮಾತನಾಡಿ, ಭಾರತವು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಬಲ ರಾಷ್ಟ್ರವಾಗಿದೆ ಪ್ರಸ್ತುತ ವಿಶ್ವದ ಮೂರನೇ ಆರ್ಥಿಕತೆಯ ರಾಷ್ಟ್ರವಾಗಿದ್ದು ಮುಂದಿನ ಮೂರು ವರ್ಷದೊಳಗೆ ವಿಶ್ವದ ಎರಡನೇ ಪ್ರಬಲ ಆರ್ಥಿಕ ರಾಷ್ಟ್ರವಾಗಿ ಬೆಳೆಯಲಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರದ ಜೊತೆಗೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಬಲಿಷ್ಠ ರಾಷ್ಟ್ರವಾಗಲಿದೆ ಎಂದರು.
ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗಜಾನನ ಮರಾಠೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಳಾದಂತಹ ಗ್ರಾಮೀಣ ಭಾಗದಲ್ಲಿ ಗುರುಕುಲ ಪರಂಪರೆಯ ಶಿಕ್ಷಣ ಸಂಸ್ಥೆಯು 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಅತ್ಯಂತ ಸಂತಸದ ವಿಚಾರ. ಸಮಸ್ತ ದಾನಿಗಳ, ಶಿಕ್ಷಣ ಸಂಸ್ಥೆಯ ಪೋಷಕರ ಹಾಗೂ ಊರವರ ಸಹಕಾರದಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು. ಪ್ರಾಥಮಿಕ ಶಿಕ್ಷಣದ ಜೊತೆಗೆ ಪ್ರೌಢ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಮುಂದಿನ ಎರಡು ವರ್ಷದೊಳಗೆ ಪ್ರೌಢಶಾಲಾ ವಿಭಾಗವನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಅಧ್ಯಕ್ಷರಾದ ಡಾ. ಎಂ ಪ್ರಭಾಕರ ಜೋಶಿ, ಖ್ಯಾತ ಸಾಹಿತಿಗಳು ಹಾಗೂ ವಾಗ್ಮಿ ಎಚ್ ಡುಂಡಿರಾಜ್, ಬಜಗೋಳಿ ಆರೂರ್ಸ್ ಕ್ಲಿನಿಕ್ ನ ವೈದ್ಯರಾದ ಡಾ. ವೆಂಕಟಗಿರಿ ರಾವ್, ಮುಂಬೈ ಉದ್ಯಮಿ ಸತೀಶ್ ಶೆಟ್ಟಿ ದೇವಸ, ಖ್ಯಾತ ನ್ಯಾಯವಾದಿಗಳಾದ ನಾರಾಯಣ ಹೆಬ್ಬಾರ್, ನಿವೃತ್ತ ತಹಶಿಲ್ದಾರ್ ಶಾಂತರಾಮ್ ಚಿಪಳೂಣ್ಕರ್, ಪ್ರಗತಿಪರ ಕೃಷಿಕರಾದ ಮಾಧವ ಡೊಂಗ್ರೆ, ಗುರುಕುಲಶಾಲೆಯ ಸಂಚಾಲಕರಾದ ಸುಧಾಕರ ಡೊಂಗ್ರೆ, ಶರತ್ ಚಂದ್ರ ಮರಾಠೆ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ನಾಗಭೂಷಣ ಮರಾಠೆ ಸ್ವಾಗತಿಸಿ, ಸತೀಶ್ ಶೆಟ್ಟಿ ವಂದಿಸಿದರು.
ರಘುಪತಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

    

   

             

     

             

           
   

 

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

 

Leave a Reply

Your email address will not be published. Required fields are marked *