ಕಾರ್ಕಳ: ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಕಾರ್ಕಳ ವಿಧಾನಸಭಾ ವ್ಯಾಪ್ತಿಯ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಯಾವುದೇ ಅನಾಹುತವಾಗದಂತೆ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ತಮ್ಮ ಹೊಣೆಗಾರಿಕೆಯನ್ನು ಬೇರೆ ಇಲಾಖೆಗೆ ವರ್ಗಾಯಿಸುವ ಚಾಳಿ ಬಿಟ್ಟು ಪರಸ್ಪರ ಇಲಾಖೆಗಳ ಜತೆ ಸಮನ್ವಯತೆ ಸಾಧಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಶಾಸಕ ಸುನಿಲ್ ಕುಮಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾರ್ಕಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪಗಳ ನಿರ್ವಹಣೆ ಕುರಿತು ನಡೆದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕ ಸುನಿಲ್ ಕುಮಾರ್, 3 ತಿಂಗಳ ಮಳೆಗಾಲದಲ್ಲಿ ಎನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕೆನ್ನುವ ಕುರಿತ ಅನುಭವ ಅಧಿಕಾರಿಗಳಿಗೆ ಹೊಸತೇನಲ್ಲ, ಆದರೂ ಅಧಿಕಾರಿಗಳು ಸದಾ ಎಚ್ಚರಿಕೆ ವಹಿಸಬೇಕು. ಮುಂದಿನ 3 ತಿಂಗಳು ತಮ್ಮ ಮೊಬೈಲ್ ಗಳನ್ನು ನಾಟ್ ರೀಚಬಲ್ ಅಥವಾ ಸ್ವಿಚ್ಡ್ ಆಫ್ ಮಾಡದೇ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದರು. ಪ್ರಮುಖವಾಗಿ ಪಂಚಾಯಿತಿ ಪಿಡಿಓಗಳು ಹಾಗೂ ವಿಎಗಳು ಸ್ಥಳೀಯ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಸಹಕಾರ ಪಡೆದು ತುರ್ತು ಸಂದರ್ಭಗಳಲ್ಲಿ ಸನ್ನದ್ದರಾಗಬೇಕೆಂದು ಸೂಚಿಸಿದರು.
ಪ್ರಮುಖವಾಗಿ ಶಾಲಾ ಮಕ್ಕಳ ಸುರಕ್ಷತೆಗೆ ಅಧಿಕಾರಿಗಳು ಅತ್ಯಂತ ಹೆಚ್ಚಿನ ಒತ್ತು ನೀಡಬೇಕು. ಶಾಲೆಗಳ ಆವರಣದಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್ಗಳನ್ನು ಶಾಲೆ ಆರಂಭವಾಗುವ ಮುನ್ನವೇ ಸ್ಥಳಾಂತರಿಸಬೇಕು. ಇದಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ಶಾಲೆಗಳ ಮುಖ್ಯೋಪಾಧ್ಯರು ಹಾಗೂ ಪೋಷಕರ ಜತೆ ಚರ್ಚಿಸಿ ಹಳ್ಳ ಹಾಗೂ ಕಾಲು ಸಂಕ ದಾಟಿ ಬರುವ ಮಕ್ಕಳ ಸುರಕ್ಷತೆ ಕುರಿತು ವಿಶೇಷ ನಿಗಾವಹಿಸುವಂತೆ ಶಾಸಕರು ಸೂಚಿಸಿದರು. ಇದಲ್ಲದೇ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಇಓ ಕೂಡ ಮಕ್ಕಳ ಸುರಕ್ಷತೆಗೆ ಬಗ್ಗೆ ಶಿಕ್ಷಣಾಧಿಕಾರಿಗಳ ಜತೆ ಕೈಜೋಡಿಸಬೇಕೆಂದರು. ಪ್ರವಾಹ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುರಕ್ಷತಾ ಸಲಕರಣೆಗಳ ಜೊತೆ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಶಾಸಕ ಸುನಿಲ್ ಕುಮಾರ್ ಸೂಚಿಸಿದರು
ರಸ್ತೆಗಳಿಗೆ ಬಾಗಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೇಲಾಧಿಕಾರಿಗಳ ಅನುಮತಿಗೆ ಕಾಯದೇ ತಕ್ಷಣವೇ ತೆರವುಗೊಳಿಸಬೇಕೆಂದರು. ಪ್ರತೀವರ್ಷದಂತೆ ಗಿಡ ನೆಡುವ ಕಾರ್ಯಕ್ರಮವನ್ನು ಹೆಚ್ಚಿನ ಮಳೆಯಾಗುವ ಕಾರಣದಿಂದ ಸ್ವಲ್ಪ ಮುಂದೂಡಿ, ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಗಿಡನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುವಂತೆ ಸೂಚಿಸಿದರು.
ಚರಂಡಿಯ ಹೂಳೆತ್ತುವಿಕೆ ಹಾಗೂ ದುರಸ್ತಿ ವಿಚಾರದಲ್ಲಿ ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳು ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ರಸ್ತೆಗಳಲ್ಲಿ ನೀರು ಹರಿದು ರಸ್ತೆಗಳು ಹೊಂಡಮಯವಾಗುತ್ತವೆ ಎಂದರು. ಪೈಪ್ ಲೈನ್ ಕಾಮಗಾರಿ ವಿಚಾರದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಎಲ್ಲಾ ಕಡೆಗಳಲ್ಲಿ ಪೈಪ್ ಲೈನ್ ಕಾಮಗಾರಿಗಾಗಿ ರಸ್ತೆ ಅಗೆದು ಪೈಪ್ ಹಾಕಿ ಮಣ್ಣು ಮುಚ್ಚಿದರೆ ಮಣ್ಣು ಸಿಂಕ್ ಆಗಿ ಸಾರ್ವಜನಿಕರಿಗೆ ತೊಂದರೆಗಳು ಆಗುತ್ತವೆ. ಪೈಪ್ ಅಳವಡಿಸಿದ ಬಳಿಕ ಮಣ್ಣನ್ನು ಮುಚ್ಚಿ ರಸ್ತೆಗೆ ಡಾಮರ್ ಹಾಕಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ, ಕುಂದಾಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಶ್ರೀಧರ್, ಸಹಾಯಕ ಕಮೀಷನರ್ ರಶ್ಮಿ ಎಸ್,ಆರ್, ಕಾರ್ಕಳ ತಹಶೀಲ್ದಾರ್ ಪ್ರದೀಪ್ ಕುಮಾರ್, ಹೆಬ್ರಿ ತಹಶೀಲ್ದಾರ್ ಪ್ರಸಾದ್, ಹೆಬ್ರಿ ತಾಲೂಕು ಪಂಚಾಯಿತಿ ಇಓ ವಿಜಯ, ಕಾರ್ಕಳ ತಾಲೂಕು ಪಂಚಾಯಿತಿ ಇಓ ಪ್ರಶಾಂತ್ ರಾವ್ ಉಪಸ್ಥಿತರಿದ್ದರು.