ಕಾರ್ಕಳ: ಸೌಜನ್ಯಾಳ ಕೊಲೆ ಪ್ರಕರಣದಲ್ಲಿ ಅವಳ ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ.ಕಾನೂನು ವ್ಯವಸ್ಥೆಯಲ್ಲಿ ಬಡವರ ನೋವಿಗೆ ಸ್ಪಂದನೆ ಸಿಕ್ಕಿಲ್ಲ, ಯಾವ ಜನಪ್ರತಿನಿಧಿಯೂ ಕೂಡ ಇವರ ನೋವಿಗೆ ಸ್ಪಂದಿಸುತ್ತಿಲ್ಲ,ಆದ್ದರಿಂದ ನೊಂದವರಿಗೆ ನ್ಯಾಯ ಸಿಗಬೇಕೆನ್ನುವ ಉದ್ದೇಶದಿಂದ ಈ ಬಾರಿ ಯಾವ ಪಕ್ಷದ ಅಭ್ಯರ್ಥಿಗಳಿಗೂ ಮತ ಚಲಾಯಿಸದೇ ನೋಟಾ ಚಲಾಯಿಸುವ ಮೂಲಕ ನ್ಯಾಯದ ಪರವಾಗಿ ನಮ್ಮ ಹೋರಾಟವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ.
ಅವರು ಸೋಮವಾರ ಕಾರ್ಕಳ ಹೊಟೇಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ನಮಗೆ ಚುನಾಯಿತ ಜನಪ್ರತಿನಿದಿಗಳ ಮೇಲೆ ನಂಬಿಕೆಯಿಲ್ಲ , ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಸೌಜನ್ಯಕ್ಕಾದರೂ ನೊಂದ ನಿರಪರಾಧಿ ಸಂತೋಷ್ ರಾವ್ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಲು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ನೋಟಾ ಕ್ಕೆ ಬೆಂಬಲ ವ್ಯಕ್ತ ಪಡಿಸಿ ಎಂದು ತಮ್ಮಣ್ಣ ಶೆಟ್ಟಿ ಮನವಿ ಮಾಡಿದರು.
ಪುತ್ತೂರಿನ ಅಕ್ಷತಾ , ಹೆಬ್ರಿಯ ಸುಚೇತಾ ಕೊಲೆ , ಹುಬ್ಬಳ್ಳಿಯ ನೇಹಾ ಪ್ರಕರಣಗಳಿಂದ ಜನಪ್ರತಿನಿಧಿಗಳು ರಾಜಕೀಯ ಲಾಭ ಪಡೆದರು . ಸೌಜನ್ಯ ಅತ್ಯಾಚಾರ ಪ್ರಕರಣ, ವೇದವಲ್ಲಿ ಕೊಲೆ ಪ್ರಕರಣ , ಮಾವುತನ ಕೊಲೆಯಲ್ಲೂ ನ್ಯಾಯ ಸಿಗಲಿಲ್ಲ. ಯಾವ ಜನಪ್ರತಿನಿಧಿಗಳು ಕೂಡ ಬಡವರ ನೋವಿಗೆ ಸ್ಪಂದಿಸಲಿಲ್ಲ. ಸಮಾಜದಲ್ಲಿ ಬಲಾಢ್ಯರ ಪರವಾಗಿ ರಾಜಕಾರಣಿಗಳು ನಿಲ್ಲುತ್ತಾರೆ, ಇವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಧರ್ಮ,ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಮತ ಪಡೆಯುವುದೇ ರಾಜಕೀಯ ಪಕ್ಷಗಳ ಕಾಯಕವಾಗಿದೆ. ಆದ್ದರಿಂದ ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂತೋಷ್ ರಾವ್ ತಂದೆ ಸುಧಾಕರ್ ರಾವ್, ಸಹೋದರ ಸಂಜಯ್ ರಾವ್ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ದಿನೇಶ್ ಗಣಿಗ ವಿನಯ್ ಬಜಗೋಳಿ ಸದಾನಂದ ನಿಟ್ಟೆ ಮುಂತಾದವರು ಉಪಸ್ಥಿತರಿದ್ದರು.










