ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ತಾರಕಕ್ಕೇರಿದ್ದು, ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸರ್ಕಾರ ರೈತರಿಗೆ ನೀಡಿದ್ದ ನೊಟೀಸ್ ಹಿಂಪಡೆಯುವAತೆ ಡಿಸಿಗಳಿಗೆ ಸೂಚಿಸಿತ್ತು.ಇತ್ತ ನೊಟೀಸ್ ಹಿಂಪಡೆದ ಬಳಿಕ ವಕ್ಫ್ ಎಂದು ನಮೂದಾಗಿದ್ದ ಜಮೀನಿನಲ್ಲಿ ಉಳುಮೆ ಮಾಡಲು ಮುಂದಾದ ರೈತರ ಮೇಲೆ ಪೊಲೀಸರು ಲಾಠಿಚಾರ್ಚ್ ನಡೆಸಿ ಎಫ್ ಐ ಆರ್ ದಾಖಲಿಸಿದ್ದಾರೆ.
ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ. ಅಲ್ಲಿನ ರೈತರ ಜಮೀನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ಇದರಿಂದ ರೈತರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅಲ್ಲದೆ ವಕ್ಫ್ ಆಸ್ತಿ ಎಂದು ನಮೂದಾದ ಜಮೀನಿನಲ್ಲಿ ಉಳಿಮೆ ಮಾಡಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದಾರೆ. ರೈತರ ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
ರೈತರಾದ ಟಿ.ಎನ್ ಬೈರಾರೆಡ್ಡಿ, ಎನ್.ಮುನಿರೆಡ್ಡಿ, ಎನ್ ಚನ್ನಕೃಷ್ಣಪ್ಪ, ಲಕ್ಷ್ಮಿದೇವಮ್ಮ, ನಾರಾಯಣಪ್ಪ, ವೆಂಕಟರೆಡ್ಡಿ, ಶ್ರೀರಾಮರೆಡ್ಡಿ, ನಾಗಮ್ಮ, ಕೆ.ಲಕ್ಷ್ಮಮ್ಮ, ಮುನಿಲಕ್ಷ್ಮಮ್ಮ ಸೇರಿದಂತೆ 10ಕ್ಕೂ ಹೆಚ್ಚು ರೈತರಿಗೆ ಸೇರಿದ ಸರ್ವೆ ನಂಬರ್ 13/1ರಲ್ಲಿ 2 ಎಕರೆ 21 ಗುಂಟೆ, 13/3 ರಲ್ಲಿ 20 ಗುಂಟೆ, ಸರ್ವೆ ನಂಬರ್ 20ರಲ್ಲಿರುವ 1 ಎಕರೆ 36 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ.
ಇದರಿಂದ ಆಕ್ರೋಶಗೊಂಡ ರೈತರು, ಚಿಂತಾಮಣಿ ಜಾಮಿಯಾ ಮಸೀದಿ ಸದಸ್ಯರು ಮತ್ತು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ನಂತರ 10ಕ್ಕೂ ಹೆಚ್ಚು ರೈತರು ವಿವಾದಿತ ಜಮೀನುಗಳಲ್ಲಿ ಉಳುಮೆ ಮಾಡಲು ಮುಂದಾಗಿದ್ದಕ್ಕೆ, ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು. ನಂತರ ಚಿಂತಾಮಣಿ ಜಾಮಿಯಾ ಮಸೀದಿ ಕಾರ್ಯಾದರ್ಶಿ ದೂರಿನ ಆಧಾರದ ಮೇಲೆ ರೈತರ ವಿರುದ್ಧ ಬಿಎನ್ಎಸ್ ಸೆಕ್ಷನ್ 324(4), 329(3)ರಡಿ ಪ್ರಕರಣ ದಾಖಲಾಗಿದೆ.
































































































