ಕಾರ್ಕಳ: ಇಲ್ಲಿನ ಅಯ್ಯಪ್ಪ ನಗರದಿಂದ ಅಪಹರಣಕ್ಕೊಳಗಾಗಿ ಅತ್ಯಾ ಚಾರಕ್ಕೀಡಾದ ಸಂತ್ರಸ್ತೆ ಆ. 28ರಂದು ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದು, ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಡ್ರಗ್ಸ್ ಪೆಡ್ಲರ್ಗಾಗಿ ತನಿಖೆ ಮುಂದುವರಿದಿದ್ದು, ಇವರಿಗೆ ಈಗ ತಿರುಪತಿ, ಬೆಂಗಳೂರು ತನಕ ಸಂಪರ್ಕ ಇತ್ತು ಎಂದು ಹೇಳಲಾಗುತ್ತಿದೆ.
ಆ. 24ರಂದು 21ರ ಹರೆಯದ ಹಿಂದೂ ಯುವತಿಯನ್ನು ಪುಸಲಾಯಿಸಿ ಅಪಹರಿಸಿ ಕೌಡೂರು ಬಳಿಯ ರಂಗನಪಲ್ಕೆಯ ಕಾಡಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಲ್ತಾಫ್, ಕ್ಸೇವಿಯರ್ ರಿಚರ್ಡ್ ಕ್ವಾಡ್ರಸ್ ಹಾಗೂ ಅಭಯ್ ಅವರನ್ನು ಬಂಧಿಸಲಾಗಿದೆ. ಜತೆಗೆ ಮತ್ತಿಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇವರ ಪೈಕಿ ಓರ್ವ ಶಿರ್ವ ಮೂಲದವ ಹಾಗೂ ಇನ್ನೋರ್ವ ಬೆಂಗಳೂರು ಮೂಲದವ ಎನ್ನಲಾಗಿದೆ.
ಯುವತಿಗೆ ನೀಡಲಾದ ಡ್ರಗ್ಸ್ ಮೂಲದ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದು, ಅದು ಬೆಂಗಳೂರು, ತಿರುಪತಿಯಿಂದ ಸರಬರಾಜು ಆಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅಭಯ್ ಹಾಗೂ ಇನ್ನಿಬ್ಬರು ಶಂಕಿತರನ್ನು ಪೊಲೀಸರು ಬೆಂಗಳೂರು ಹಾಗೂ ತಿರುಪತಿಗೆ ಕರೆದೊಯ್ದಿದ್ದಾರೆ. ಪ್ರಕರಣ ತೀವ್ರ ಕುತೂಹಲ ಪಡೆದುಕೊಂಡಿದ್ದು, ಘಟನೆ ಹಿಂದೆ ಬೃಹತ್ ಡ್ರಗ್ಸ್ ಮಾಫಿಯ ಇರುವುದು ತನಿಖೆಯಿಂದ ಪತ್ತೆಯಾಗಿದೆ. ಡ್ರಗ್ಸ್ ಜಾಲದ ಹಿಂದಿರುವ ವ್ಯಕ್ತಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
`