ಕಾರ್ಕಳ, ಅ,19: ಸುರಿಯುತ್ತಿರುವ ಗುಡುಗು ಸಹಿತ ಮಳೆಯ ನಡುವೆ ಕಾರ್ಕಳದಲ್ಲಿ ಸಾವಿರಾರು ಆರೆಸೆಸ್ಸ್ ಕಾರ್ಯಕರ್ತರು ಗಣವೇಷ ಧರಿಸಿ ಪಥಸಂಚಲನ ನಡೆಸಿದರು. ಕಾರ್ಕಳದ ಬಂಡೀಮಠ ಬಸ್ಸು ನಿಲ್ದಾಣದಿಂದ ಆರಂಭವಾದ ಆರೆಸೆಸ್ಸ್ ಪಥಸಂಚಲನ ಅನಂತಶಯನ ವೃತ್ತದವರೆಗೆ ಸಾಗಿ ಬಂತು.ಮಳೆಯ ನಡುವೆ ಕಾರ್ಯಕರ್ತರು ವಿಚಲಿತರಾಗದೇ ಹೆಜ್ಜೆ ಹಾಕುವ ಮೂಲಕ ಶಿಸ್ತು ಹಾಗೂ ಬದ್ಧತೆಗೆ ಮಾದರಿಯಾದರು.
ಸಂಘದ ಹಿರಿಯ ಕಾರ್ಯಕರ್ತರಾದ 87ರ ಹರೆಯದ ಬೋಳ ಪ್ರಭಾಕರ ಕಾಮತ್ ತನ್ನ ಇಳಿವಯಸ್ಸಲ್ಲೂ ಶಿಸ್ತಿನ ಸಿಪಾಯಿಯಂತೆ ಗಣವೇಷಧರಿಸಿ ಮಳೆಯ ನಡುವೆಯೂ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದಲ್ಲದೇ ಶಾಸಕ ಸುನಿಲ್ ಕುಮಾರ್ ಕೂಡ ಗಣವೇಷ ಧರಿಸಿ ಮಳೆಯ ನಡುವೆಯೂ ಸರತಿ ಸಾಲಿನಲ್ಲಿ ನಿಂತು ಪಥಸಂಚಲನದಲ್ಲಿ ಇತರೇ ಕಾರ್ಯಕರ್ತರ ಜೊತೆ ಹೆಜ್ಜೆ ಹಾಕಿದರು.