ಮೈಸೂರು : ಮುಡಾ, ವಾಲ್ಮೀಕಿ ಎರಡು ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯನವರೇ ಅಪರಾಧಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅನೈತಿಕವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ. ಮುಡಾ, ವಾಲ್ಮೀಕಿ ಎರಡು ಕೇಸ್ನಲ್ಲಿ ಅವರೇ ಅಪರಾಧಿ. ಮುಡಾ ವಿಚಾರದಲ್ಲಿ ಸೈಟ್ ವಾಪಸ್ ಕೊಟ್ಟು ಸಿಕ್ಕಿಕೊಂಡಿದ್ದಾರೆ. ಇನ್ನೂ ವಾಲ್ಮೀಕಿ ಹಗರಣ ಸಂಬಂಧ ಇಡಿ ಕೂಡ ಜನರ ದುಡ್ಡು ಚುನಾವಣೆಗೆ ಬಳಕೆಯಾಗಿರುವ ಬಗ್ಗೆ ಪ್ರೆಸ್ ರಿಲೀಸ್ ಮಾಡಿದೆ. ಅಧಿಕಾರಿ ಸೂಸೈಡ್ ಆಗಿದೆ, ಮಂತ್ರಿ ರಾಜೀನಾಮೆ ಆಗಿದೆ. ಇದರ ನೇರ ಹೊಣೆ ಸಿದ್ದರಾಮಯ್ಯ ಅವರೇ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯರೇ ಹಣಕಾಸು ಸಚಿವ, ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ದುಡ್ಡು ಆಂಧ್ರ, ಬಳ್ಳಾರಿ ಚುನಾವಣೆಗೆ ಹೋಗಿದೆ. ಇದನ್ನು ಇಡಿ ಹಾಗೂ ಬೇರೆ ಸಂಸ್ಥೆಗಳು ಕೂಡ ಹೇಳಿವೆ. ಮುಖ್ಯಮಂತ್ರಿ ಸ್ಥಾನದಲ್ಲಿರಲು ಸಿಎಂಗೆ ನೈತಿಕತೆ ಇಲ್ಲ. ಹಾಗಾಗಿ ತಕ್ಷಣ ರಾಜೀನಾಮೆ ನೀಡಬೇಕು. ಲೋಕಾಯುಕ್ತವನ್ನೆ ತೆಗೆದುಹಾಕಿದ್ದರು ಎಂದರು.
ಈ ಬಾರಿ ಕೂಡ ಪ್ರಕರಣದಲ್ಲಿ ಪ್ರಭಾವ ಬೀರುತ್ತಿದೆ ಅನ್ನಿಸುತ್ತಿದೆ. ಸೈಟ್ ವಾಪಸ್ ಮಾಡಿದ್ದು ಕಣ್ಮುಂದೆ ಇದೆ. ಅವರ ಕುಟುಂಬದವರೇ ಪತ್ರ ಬರೆದು ವಾಪಸ್ ಕೊಟ್ಟಿದ್ದಾರೆ, ಇದು ಯಾರ ತಪ್ಪು. 1992 ರಿಂದ ಸಿದ್ದರಾಮಯ್ಯ ಒಂದಲ್ಲ ಒಂದು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹೀಗಿರುವಾಗ ಇವರಿಗೆ ಗೊತ್ತಿಲ್ಲದೆ ಈ ರೀತಿ ಆಗಿದೆ ಅನ್ನೋದನ್ನು ಊಹೆ ಮಾಡಲು ಆಗುವುದಿಲ್ಲ. ಹಾಗಾಗಿದ್ದರೆ ರಾಜಕೀಯದಲ್ಲಿ ಇರಲು ಅವರಿಗೆ ಲಾಯಕ್ಕಿಲ್ಲ ಎಂದರು.













