ಕಾರ್ಕಳ: ಬಡವರ ಬಗ್ಗೆ ಕಾಳಜಿ, ಸಹಾನೂಭೂತಿ ಇರಲಿ ಎಂದು ಜಿಲ್ಲಾಧಿಕಾರಿಗೆ ಸಭೆಯಲ್ಲಿ “ಪ್ರವಚನ” ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಬಡವರ ಮೇಲೆ ” ಪ್ರಹಾರ” ಮಾಡಲು ಹೊರಟಿದ್ದಾರೆ ಎಂದು ಕಾರ್ಕಳ ಶಾಸಕ , ಮಾಜಿ ಸಚಿವರಾದ ವಿ ಸುನಿಲ್ ಕುಮಾರ್ ಸಿಎಂ ವಿರುದ್ಧ X ನಲ್ಲಿ ಕಿಡಿಕಾರಿದ್ದಾರೆ.
ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧರು, ಅಸಹಾಯಕರು, ದುರ್ಬಲರಿಗೆ ನೀಡುತ್ತಿದ್ದ ಪಿಂಚಣಿ ಹಣದ ಮೇಲೆ ಈಗ 60 ಪರ್ಸೆಂಟ್ ಸರ್ಕಾರದ ಕಣ್ಣು ಬಿದ್ದಿದೆ. 21.87 ಲಕ್ಷ ವೃದ್ಧಾಪ್ಯ ಹಾಗೂ 31.33 ಲಕ್ಷ ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಲ್ಲಿ ಅನರ್ಹರನ್ನು ಹುಡುಕುವುದಕ್ಕೆ ಈ ಸರ್ಕಾರ ಮುಂದಾಗಿದ್ದು, 9.04 ಲಕ್ಷ ವೃದ್ಧಾಪ್ಯ ವೇತನದಾರರು 14.15 ಲಕ್ಷ ಸಂಧ್ಯಾ ಸುರಕ್ಷಾ ಕಾರ್ಡ್ ಗಳನ್ನು ರದ್ದು ಮಾಡುವುದಕ್ಕೆ ಕಂದಾಯ ಇಲಾಖೆಯಿಂದ ಅಧಿಕೃತ ಆದೇಶ ನೀಡಲಾಗಿದೆ. ತಮ್ಮದು ಆಲಿಸುವ ಸರ್ಕಾರ ಎಂದು ಜಾಹೀರಾತಿನಲ್ಲಿ ಫೋಸು ಕೊಡುವ ಕಾಂಗ್ರೆಸ್ ಸರ್ಕಾರ ಬಡವರ ಪಿಂಚಣಿ ಹಣದಲ್ಲಿ ಉಳಿತಾಯ ಮಾಡಲು ಹೊರಟಿದೆ. ಸರ್ಕಾರ ದಿವಾಳಿ ಅಂಚಿಗೆ ತಲುಪಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಎಂದು ಸುನಿಲ್ ಕುಮಾರ್ ಟ್ವೀಟ್ ನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಪ್ರಸ್ನಿಸಿದ್ದಾರೆ.