
ಮಂಗಳೂರು, ನ. 25: ಕಳೆದ ಐದಾರು ತಿಂಗಳಿಂದ ಕರಾವಳಿಯಲ್ಲಿ ಶಾಂತಿ ನೆಲೆಸಿತ್ತು. ಈ ನಡುವೆ ಇದೀಗ ಮತ್ತೊಮ್ಮೆ ಯುವಕನ ಮೇಲೆ ತಲ್ವಾರ್ ದಾಳಿ ನಡೆದಿದ್ದು, ಆತಂಕ ಉಂಟುಮಾಡಿದೆ. ಸೋಮವಾರ ಸಂಜೆ ಮಂಗಳೂರು ಹೊರವಲಯದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಖಿಲೇಶ್ ಎಂಬ ಯುವಕನ ಮೇಲೆ ನಾಲ್ಕು ಜನರ ತಂಡವೊಂದು ತಲ್ವಾರ್ನಿಂದ ದಾಳಿ ಮಾಡಿದೆ. ದಾಳಿಯಿಂದ ಮೊಣಕೈಗೆ ಗಾಯವಾಗಿದ್ದು, ಅಖಿಲೇಶ್ಗೆ ಮೂಡಬಿದಿರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೈಕಿನಲ್ಲಿ ಬಂದ ನಾಲ್ಕು ಜನ ದುಷ್ಕರ್ಮಿಗಳು ಘಟನೆ ಬಳಿಕ ಪರಾರಿಯಾಗಲು ಯತ್ನಿಸಿದ್ದಾರೆ. ಮೂವರು ಒಂದೇ ಬೈಕ್ನಲ್ಲಿ ಪರಾರಿಯಾಗಿದ್ದರೆ ಮತ್ತೋರ್ವ ಆರೋಪಿ ಸಿನಾನ್ ಪರಾರಿಯಾಗಲು ಯತ್ನಿಸಿದ್ದಾನೆ. ಸಿಕ್ಕ ಸಿಕ್ಕ ವಾಹನಗಳನ್ನು ಬಲವಂತವಾಗಿ ಅಡ್ಡಹಾಕಿದ್ದಾನೆ. ಆದರೆ ಯಾರು ಕೂಡ ನಿಲ್ಲಿಸಿಲ್ಲ. ಓರ್ವ ಬೈಕ್ ಸವಾರ ಈತನ ಪುಂಡಾಟದಿಂದ ಗಾಬರಿಯಾಗಿ ಬೈಕ್ನಿಂದ ಬಿದ್ದಿದ್ದಾನೆ. ಅಷ್ಟರಲ್ಲಿ ಸಿನಾನ್ನನ್ನು ಸ್ಥಳೀಯರು ಹಿಡಿದು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಾಲ್ವರು ಒಂದೇ ಬೈಕ್ನಲ್ಲಿ ಚಾಕು ಹಿಡಿದು ಹೋಗುತ್ತಿದ್ದರು. ಅದನ್ನು ನೋಡಿದ ಅಖಿಲೇಶ್ ಅವರ ಫೋಟೊ ತೆಗೆದಿದ್ದಾರೆ. ಆ ಕಾರಣ ಅವರು ಈತನ ಮೇಲೆ ದಾಳಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅಖಿಲೇಶ್ಗೆ ಸಣ್ಣಪುಟ್ಟ ಗಾಯವಾಗಿದೆ.
ನಾಲ್ವರು ಬಾರ್ನಿಂದ ಕುಡಿದು ಬರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಕುಡಿದ ಮತ್ತಿನಲ್ಲಿ ಆಗಿರುವ ಗಲಾಟೆಯೇ ಅಥವಾ ಬೇರೆ ಏನಾದರೂ ಕಾರಣ ಇದೆಯೇ ಎಂಬ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.ಬಜ್ಪೆ ಮತ್ತು ಮೂಡಬಿದಿರೆ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಉಳಿದ ಮೂವರು ಯಾರು ಎಂಬುದು ಕೂಡ ಗೊತ್ತಾಗಿದೆ. ಆರೋಪಿಗಳ ಬಂಧನದ ಬಳಿಕವೇ ಈ ಕೃತ್ಯಕ್ಕೆ ಕಾರಣ ಏನು ಎಂಬುದು ಗೊತ್ತಾಗಲಿದೆ.
.
