ಕಾರ್ಕಳ: ಸಂವಿಧಾನದ ಆಶಯಗಳಿಗೆ ಬೆಂಕಿ ಹಚ್ಚಿ ಸ್ವಾಯತ್ತ ಸಂಸ್ಥೆಗಳ ಅಧಿಕಾರ ಕಸಿದು,ಪ್ರಶ್ನಿಸುವವರನ್ನು ಜೈಲಿಗಟ್ಟಿ ಸರ್ವಾಧಿಕಾರದ ಆಡಳಿತ ನಡೆಸಿದ ಬಿಜೆಪಿ ನಾಯಕರಿಗೆ 75ರ ತುರ್ತು ಪರಿಸ್ಥಿತಿಯ ಬಗ್ಗೆಯಾಗಲಿ ದೇಶದ ಸಂವಿಧಾನದ ಬಗ್ಗೆಯಾಗಲಿ ಮಾತನಾಡುವ ನೈತಿಕತ ಹಕ್ಕಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತು ಬಹುಮತ ಗಳಿಸದೇ ಸ್ವತಂತ್ರವಾಗಿ ಸರ್ಕಾರ ರಚಿಸುವ ಶಕ್ತಿ ಕಳಕೊಂಡ ಬಿಜೆಪಿಗೆ ಸಧ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಯಾವುದೆ ಅಸ್ತ್ರ ಸಿಗದೇ ತುರ್ತು ಪರಿಸ್ಥಿತಿಯ ಕಾಲವನ್ನು ಕೆದಕಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುತ್ತಿದೆ. ಅಂಬೇಡ್ಕರ್ ಪ್ರತಿಪಾದಿಸಿದ ಸಂವಿಧಾನದ ಜನಪರ ಆಶಯಗಳನ್ನು ಜನರಿಗೆ ತಲಪಿಸುವ ಗುರಿಯೊಂದಿಗೆ ದಿ. ಇಂದಿರಾ ಗಾಂಧಿ 1975ರಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ 20ಅಂಶ ಕಾರ್ಯಕ್ರಮಗಳನ್ನು ದೇಶದ ಮೂಲಭೂತವಾದಿ ಬಂಡವಾಳಶಾಹೀ ಶಕ್ತಿಗಳ ಸಂವಿಧಾನ ವಿರೋಧಿ ಉಗ್ರ ವಿರೋಧದ ನಡುವೆ ಅನುಷ್ಠಾನಗೊಳಿಸುವುದು ಕಷ್ಠ ಸಾಧ್ಯವೆನಿಸಿದಾಗ, ದೇಶವಾಸಿಗಳ ಹಿತ ಕಾಯುವ ದೃಷ್ಠಿಯಿಂದ ಸಂವಿಧಾನದ ಆಶಯಕ್ಕೆ ಪೂರಕವಾಗಿ ಅಧಿಕೃತ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ನಿಯಮಿತ ಅವಧಿಯಲ್ಲಿ ಹಿಂತೆಗೆದುಕೊಳ್ಳಲಾಗಿತ್ತು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶವನ್ನು ಒಂದು ಅರ್ಥದ ಅಘೋಷಿತ ತುರ್ತುಪರಿಸ್ಥಿತಿ ಯಡಿಯಲ್ಲಿ ಸರ್ವಾಧಿಕಾರದ ಅಡಳಿತ ನಡೆಸಿ ದೇಶದ ಅಭಿವೃದ್ದಿಯನ್ನು ಸ್ತಬ್ದಗೊಳಿಸಿ ವಿರೋಧಿಗಳನ್ನು ಧಮನಿಸುವುದನ್ನೇ ರಾಜಧರ್ಮವಾಗಿಸಿಕೊಂಡಿದ್ದ ಬಿಜೆಪಿಯವರಿಗೆ 1975ರ ಅನಿವಾರ್ಯ ತುರ್ತು ಪರಿಸ್ಥಿತಿಯ ವಿಚಾರ ತಿಳಿದಿಲ್ಲ ಎಂದು ಟೀಕಿಸಿದ್ದಾರೆ.
ಬಿಜೆಪಿ ಆಡಳಿತದ ಅವೈಜ್ಞಾನಿಕ ನೋಟು ಅಮಾನ್ಯೀಕರಣ, ಜನವಿರೋದಿ ಆರ್ಥಿಕ ನೀತಿಯ ವಿರುದ್ದ ಉನ್ನತ ಹುದ್ದೆಯಲ್ಲಿದ್ದ ಆರ್ಥಿಕ ತಜ್ಞರ ರಾಜೀನಾಮೆ, ರಾಷ್ಟ್ರೀಯ ಉದ್ದಿಮಗಳ ಖಾಸಗೀಕರಣ, ರೈತ ವಿರೋಧಿ ಕೃಷಿ ಕಾಯ್ದೆ, ದೇಶದ ಬಹುತ್ವ ವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ, ಕೋಮುವಾದಿ ಪ್ರೇರಿತ ರಾಜನೀತಿಯೇ ಬದಲಾದ ಬಿಜೆಪಿ ಆಡಳಿತಾವಧಿಯ ಸಂವಿಧಾನ ವಿರೋಧೀ ಸರ್ವಾಧಿಕಾರಿ ನಿಲುವು ವಿಶ್ವದ ಅಭಿವೃದ್ದಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಭಾರತವನ್ನು 164ನೇ ಸ್ಥಾನಕ್ಕೆ ತಂದು ನಿಲ್ಲಿಸಿರುವುದು ಬಿಜೆಪಿಯ ದುರಂತ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಬಿಪಿನ್ ಚಂದ್ರ ಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.












