ಕಾರ್ಕಳ : ಗಂಡ ಹಾಗೂ ಅತ್ತೆಯ ಕಿರುಕುಳಕ್ಕೆ ಬೇಸತ್ತು ನವ ವಿವಾಹಿತೆಯೋರ್ವಳು ತನ್ನ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ತೆಳ್ಳಾರು ರಸ್ತೆ ನಿವಾಸಿ ಮೂಲತಃ ಬಾಗಲಕೋಟ ಜಿಲ್ಲೆಯ ನಿವಾಸಿ ಶರಣಮ್ಮ ಎಂಬ ಪುತ್ರಿ ಶಂಕ್ರಮ್ಮ (20) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ. ಶಂಕ್ರಮ್ಮ ಅವರನ್ನು ಕಳೆದ 2023ರ ಡಿ. 6 ರಂದು ಬಾಗಲ ಕೋಟೆ ಜಿಲ್ಲೆಯ ಬಾದಾಮಿ ತಾಲೂಕು ನೀರಲಕೆರೆ ಯಲ್ಲನ ಎಂಬಾತನ ಜತೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದ ಆರಂಭದಲ್ಲಿ ಗಂಡನ ಮನೆಯಲ್ಲಿ ಚೆನ್ನಾಗಿ ಜೀವನ ನಡೆಸುತ್ತಿದ್ದ ಶಂಕ್ರಮ್ಮನಿಗೆ ಬಳಿಕ ಆಕೆಯ ಗಂಡ ಯಲ್ಲನ ಹಾಗೂ ಅತ್ತೆ ಗೌರಮ್ಮ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲು ಆರಂಭಿಸಿದ್ದರು. ಇದೇ ವಿಚಾರದಲ್ಲಿ ಮನನೊಂದ ಶಂಕ್ರಮ್ಮ ಮೇ 30 ರಂದು ಗಂಡನ ಮನೆಯಿಂದ ಕಿರುಕುಳ ತಾಳಲಾಗದೇ ವಾಪಾಸು ತಾಯಿ ಮನೆಯಾದ ಕಾರ್ಕಳಕ್ಕೆ ಬಂದು ಮಾನಸಿಕವಾಗಿ ಖಿನ್ನರಾಗಿ ಶನಿವಾರ ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ತನ್ನ ಮಗಳ ಸಾವಿಗೆ ಆಕೆಯ ಗಂಡ ಹಾಗೂ ಅತ್ತೆ ನೀಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಹಿಂಸೆಯೇ ಕಾರಣವೆಂದು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.