
ಕಾರ್ಕಳ,ಜ.7: ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವನ್ನಾಗಿ ಬೆಳೆಸಬೇಕೆಂಬ ದೃಷ್ಟಿಯಲ್ಲಿ ಶಾಸಕ ವಿ ಸುನಿಲ್ ಕುಮಾರ್ ರವರು ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣ ಮಾಡಿದ ಮಹತ್ವಕಾಂಕ್ಷಿ ಯೋಜನೆಯಾದ ಪರಶುರಾಮ ಥೀಮ್ ಪಾರ್ಕ್ ಇಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಅವರ ದ್ವೇಷ ಹಾಗೂ ಮತ್ಸರದ ರಾಜಕಾರಣದಿಂದಾಗಿ ಪಾಳು ಬಿದ್ದ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಕ್ರೋಶ ಹೊರಹಾಕಿದ್ದಾರೆ.
ದಿನನಿತ್ಯ ಪ್ರವಾಸಿಗರಿಂದ ತುಂಬಿ ತುಳುಕಬೇಕಾಗಿದ್ದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಕಳ್ಳತನ, ಅನೈತಿಕ ಚಟುವಟಿಕೆಗಳು ನಡೆಯುವಂತಹ ಭೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಯಾರೋ ಕಿಡಿಗೇಡಿಗಳು ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಬೀಗ ಒಡೆದು ಮೇಲ್ಚಾವಣಿಯ ತಾಮ್ರದ ಹೊದಿಕೆಯನ್ನು ಕದ್ದೊಯ್ಯುವ ಪರಿಸ್ಥಿತಿ ಬಂದಿದೆ ಎಂದರೆ ಉದಯಕುಮಾರ್ ಶೆಟ್ಟಿಯವರು.
ಇದಕ್ಕೆ ನೇರ ಹೊಣೆ. ಥೀಮ್ ಪಾರ್ಕಿನಲ್ಲಿ ಕಳ್ಳತನವಾಗಿರುವ ಬಗ್ಗೆ ತನ್ನ ಬೇಸರವನ್ನು ವ್ಯಕ್ತಪಡಿಸಿರುವ ಶಾಸಕರ ಬಗ್ಗೆ ಟೀಕೆ ಮಾಡುವ ಭರದಲ್ಲಿ ಉದಯಕುಮಾರ್ ಶೆಟ್ಟಿ ಅವರು ಶಾಸಕರ ಬಗ್ಗೆ ತೀರ ಕೆಟ್ಟವಾದ ಶಬ್ದವನ್ನು ಬಳಕೆ ಮಾಡಿರುವುದು ಖೇದಕರ. ನಾಲ್ಕು ಬಾರಿ ಶಾಸಕರಾಗಿ ಒಂದು ಬಾರಿ ಸಚಿವರಾಗಿದ್ದು ಗೌರವಾನ್ವಿತ ಕುಟುಂಬದಿಂದ ಬಂದಿರುವ ಶಾಸಕರ ಬಗ್ಗೆ ನೀಚ ಎಂಬ ಪದ ಬಳಕೆ ಮಾಡಿರುವುದು ಅವರು ಬಳಸಿರುವ ಪದದಂತೆ ಅವರ ನಡವಳಿಕೆಯನ್ನು ಎತ್ತಿ ತೋರಿಸುತ್ತದೆ. ರಾಜಕಾರಣದ ಸಭ್ಯತೆಯನ್ನು ಮೀರುವ ಮೂಲಕ ಇಲ್ಲಿಯವರೆಗೆ ಕಾರ್ಕಳದಲ್ಲಿ ನಡೆದುಕೊಂಡು ಬರುತ್ತಿದ್ದ ಉತ್ತಮ ರಾಜಕೀಯ ವ್ಯವಸ್ಥೆಯನ್ನು ಹಾಳು ಮಾಡಿದ ಕೀರ್ತಿ ಉದಯ ಶೆಟ್ಟಿಯವರಿಗೆ ಸಲ್ಲುತ್ತದೆ.
ಉದಯಕುಮಾರ್ ಶೆಟ್ಟಿ ಅವರೇ ರಾಜಕೀಯದಲ್ಲಿ ಯಾರು ಶಾಶ್ವತವಲ್ಲ ನೀವು ಮಾಡಿರುವ ತಪ್ಪು ನಿಮಗೆ ಅರಿವಾಗಿದೆ. ಇದರಿಂದ ನೀವು ಹತಾಶರಾಗಿ ಏನೇನೋ ಮಾತನಾಡಬೇಡಿ, ನಿಮ್ಮ ತಪ್ಪಿಗೆ ಪ್ರಾಯಶ್ಚಿತ ಆಗಬೇಕಾದರೆ ಕಾರ್ಕಳ ಬಿಜೆಪಿ ಯಾವಾಗಲೂ ಆಗ್ರಹಿಸುವಂತೆ ಪರಶುರಾಮ ಥೀಮ್ ಪಾರ್ಕಿಗೆ ಬಿಡುಗಡೆಗೊಳಿಸಲು ಬಾಕಿ ಇರುವ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಭೇಟಿಗೆ ಮುಕ್ತಗೊಳಿಸಲು ಅವಕಾಶ ಕಲ್ಪಿಸಿ. ಇಷ್ಟು ಮಾಡಿದರೆ ನೀವು ಎರಡೂವರೆ ವರ್ಷಗಳಿಂದ ಮಾಡುತ್ತಾ ಬಂದಿರುವ ಪಾಪಕ್ಕೆ, ದುಡಿಯುವ ಬಿಜೆಪಿ ಕಾರ್ಯಕರ್ತರಿಗೆ ಮಾಡಿದ ಅನ್ಯಾಯಕ್ಕೆ ಪ್ರಾಯಶ್ಚಿತ ಸಿಗಬಹುದು. ಇಲ್ಲದಿದ್ದರೆ ನೀವು ಇದೇ ರೀತಿ ಪದೇ ಪದೇ ಮಾನಸಿಕ ವಿಚಲಿತರಾದಂತೆ ವರ್ತಿಸಬಹುದು ಮತ್ತೆ ಅದಕ್ಕೂ ಸುನಿಲ್ ಕುಮಾರ್ ಕಾರಣ ಎಂದು ದೂರಬೇಡಿ ಎಂದು ನವೀನ್ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

.
.
