ಉಡುಪಿ: ನಗರ ಸಭೆ ವ್ಯಾಪ್ತಿಯ ಮೂಡನಿಡಂಬೂರು ಗ್ರಾಮದ ಶಿರಿಬೀಡು ವಾರ್ಡ್ ನ ಕಾಡಬೆಟ್ಟು ಎಂಬಲ್ಲಿ ಪ್ರಶಾಂತ್ ಪೈ ರವರ ವಾಸ್ತವ್ಯದ ಮನೆಯಲ್ಲಿ, ಆಗಸ್ಟ್ 18 ರಂದು ಬಾಗಿಲು ಮುರಿದು ಮನೆಯ ಒಳಗೆ ಪ್ರವೇಶಿಸಿ ದೇವರ ಪೋಟೋ ಮೇಲಿದ್ದ ಸುಮಾರು ತಲಾ ಒಂದು ಗ್ರಾಂ ತೂಕವಿರುವ 7 ಚಿನ್ನದ ಲಕ್ಷ್ಮೀ ಪದಕವಿರುವ ಮಾಲೆ ಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಕಳವಾದ ಸ್ವತ್ತುಗಳ ಅಂದಾಜು ಮೌಲ್ಯ ರೂಪಾಯಿ 35000 ಆಗಬಹುದು ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಶ್ರೀಧರ್ ವಿ ಸತಾರೆ ನೇತೃತ್ವದಲ್ಲಿ ಪಿಎಸ್ಐ ಈರಣ್ಣ ಶಿರಗುಂಪಿ , ಸಿಬ್ಬಂದಿಯವರಾದ ಹೆಚ್ ಸಿ ಸುರೇಶ್, ಪಿಸಿ ಆನಂದ ಎಸ್., ಪಿಸಿ ಹೇಮಂತ್ಕುಮಾರ್ ಹಾಗೂ ಪಿಸಿ ಎಂ.ಆರ್. ಶಿವಕುಮಾರ್ ರವರನ್ನು pಒಳಗೊಂಡ ತಂಡವು ಬಲೆಬೀಸಿದ್ದು ಶನಿವಾರ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಬಂಧಿತ ಆರೋಪಿಯನ್ನು ಉಡುಪಿಯ ಕೃಷ್ಣ ಮಠದ ರಾಜಾoಗಣ ಬಳಿ ಕೃತ್ಯಕ್ಕೆ ಬಳಸಿದ ಹಿರೋ ಹೊಂಡಾ ಸ್ಪ್ಲೇಂಡರ್ ಪ್ಲಸ್ ಬೈಕ್ ಸಮೇತ ವಶಕ್ಕೆ ಪಡೆದಿರುತ್ತಾರೆ. ಆರೋಪಿಯನ್ನು ಮಂಗಳೂರು ತಾಲೂಕಿನ ಮಂಗಲಪೇಟೆ ನಿವಾಸಿ ಅಹಮ್ಮದ್ ಭಾವ ಎಂಬವರ ಮಗ ಆರೀಫ್ ಯಾನೆ ಮುನ್ನಾ 37 ವರ್ಷ ಎಂದು ಗುರುತಿಸಲಾಗಿದೆ.
ಪ್ರಕರಣದಲ್ಲಿ ಕಳವು ಮಾಡಿದ್ದ ಒಟ್ಟು ರೂ. 35964 ಮೌಲ್ಯದ 5.400 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಕಳವು ಮಾಡಲು ಬಳಸಿದ ಹಿರೋ ಹೊಂಡಾ ಸ್ಪ್ಲೇಂಡರ್ ಪ್ಲಸ್ ಬೈಕ್ ಅಂದಾಜು ಮೌಲ್ಯ 25000 ರೂ ಮತ್ತು ಕಬ್ಬಿಣದ ರಾಡ್ಗಳನ್ನು ಸ್ವಾಧೀನಪಡಿಸಿ ಕೊಳ್ಳಲಾಗಿರುತ್ತದೆ.
ಪ್ರಕರಣದಲ್ಲಿ ದಸ್ತಗಿರಿಯಾದ ಆರೀಪ್ @ ಮುನ್ನಾ ಈತನ ವಿರುದ್ಧ ಈಗಾಗಲೇ ಹಾಸನ , ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 15 ಕ್ಕೂ ಹೆಚ್ಚೂ ಪ್ರಕರಣಗಳು ದಾಖಲಾಗಿರುತ್ತವೆ.
`