Share this news

ಉಡುಪಿ: ಪತ್ರಕರ್ತರು ಕನಸು ಕಾಣಬೇಕು. ತಮಗೆ ದೊರೆತ ಅವಕಾಶವನ್ನು ಬಳಸಿಕೊಂಡು ಕೆಲಸದ ಜೊತೆಗೆ ಇತರರ ಸಮಸ್ಯೆಗೆ ಮಿಡಿಯುವುದು ಅತೀ ಮುಖ್ಯ. ನಮ್ಮ ಸೇವೆಯ ಮೂಲಕವೇ ಸಮಾಜವನ್ನು ತಿದ್ದುವ ಕಾರ್ಯ ಮಾಡಬಹುದಾಗಿದೆ ಎಂದು ಮಣಿಪಾಲ ಎಂಐಸಿಯ ಟೆವಿಷಜನ್ ಮತ್ತು ಫಿಲ್ಮ್ ಪ್ರೊಡಕ್ಷನ್ ವಿಭಾಗದ ಪ್ರೋಫೆಸರ್ ಆಫ್ ಪ್ರಾಕ್ಟಿಸ್ ಸತ್ಯಬೋಧ ಜೋಶಿ ಹೇಳಿದ್ದಾರೆ.

ಅವರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆಯನ್ನು ಕರ್ನಾಟಕದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ್ ಇದರ ಮೂಲಪ್ರತಿಯನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಮಾಜವನ್ನು ಸುಧಾರಿಸಲು ಹೊರಟ ನಾವು ನಮ್ಮ ಬದುಕನ್ನು ಕೂಡ ನೋಡಿಕೊಳ್ಳಬೇಕಾಗುತ್ತದೆ. ಅದರ ಕಡೆ ನಾವು ಲಕ್ಷ ವಹಿಸಬೇಕಾಗಿರುವುದು ಅತೀ ಅಗತ್ಯವಾಗಿದೆ. ಮುಂದಿನ ಜನಾಂಗಕ್ಕೆ ಈ ಕ್ಷೇತ್ರ ಸುಂದರ ಆಗಿರಲು ಏನು ಮಾಡಬೇಕು ಎಂಬುದರ ಬಗ್ಗೆಯೂ ನಾವೆಲ್ಲ ಚಿಂತನೆ ಮಾಡಬೇಕು. ಜಗತ್ತು ಶ್ರಮವಹಿಸಿ ಕೆಲಸ ಮಾಡುವುದರಿಂದ ನಡೆಯುತ್ತೆ ಹೊರತು ಸಿದ್ಧಾಂತದಿಂದ ಅಲ್ಲ. ಹಾಗಾಗಿ ಸಿದ್ಧಾಂತಕ್ಕಿಂತ ಕೆಲಸ ಮುಖ್ಯ ಎಂದರು. ಸಾಹಿತ್ಯದ ಕಾರ್ಯಕ್ರಮಗಳನ್ನು ಟಿವಿ ಮಾಧ್ಯಮಗಳಲ್ಲಿ ತೋರಿಸಿದರೆ ಜನ ನೋಡುತ್ತಾರೆಯೇ ಎಂಬುದು ಪ್ರಶ್ನೆ. ಆದುರದಿಂದ ಜನರು ಏನನ್ನು ಬಯಸುತ್ತಾರೆಯೇ ಅದನ್ನೇ ಟಿವಿ ಮಾಧ್ಯಮಗಳು ತೋರಿಸುತ್ತವೆ. ಆದುದರಿಂದ ನಾವು ಕೂಡ ಸಮಾಜದ ಉದ್ಧಾರಕ್ಕೆ ಕಾರಣವಾಗಬೇಕು. ಅದಕ್ಕೆ ಜನ ಕೂಡ ಬದಲಾಗಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಪೊಲೀಸ್ ತನಿಖೆಯಲ್ಲಿ ಮಾಧ್ಯಮಗಳ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ, ಮಾಧ್ಯಮಗಳು ಜನರ ಭಾವನೆಗಳ ಕಡೆ ಹೆಚ್ಚು ಗಮನ ಕೊಡದೇ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಾಗಿದೆ. ಇಂದ ಜನರ ಮನಸ್ಥಿತಿ ಕೂಡ ಬದಲಾಗಿ, ನರಾತಕ್ಮತದ ಕಡೆ ಹೋಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಆ ಬಗ್ಗೆ ನಾವೆಲ್ಲ ಆಲೋಚನೆ ಮಾಡಬೇಕಾಗಿರುವುದು ಅತೀ ಅಗತ್ಯ ಎಂದು ಹೇಳಿದರು.

ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳು ಎಸಗುವ ಲೋಪಗಳನ್ನು ಜನರ ಮುಂದೆ ಇಡುವ ಜವಾಬ್ದಾರಿ ಮಾಧ್ಯಮದ್ದಾಗಿದೆ. ಈ ರಂಗ ಸರಕಾರ ಸೌಲಭ್ಯಗಳನ್ನು ಪಡೆದುಕೊಳ್ಳದೇ ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಕೆಲಸ ಮಾಡುತ್ತದೆ. ಸರಕಾರ ಸಾಕಷ್ಟು ಹಗರಣಗಳನ್ನು ಮಾಧ್ಯಮಗಳೇ ಬಯಲಿಗೆ ಎಳೆದಿದೆ ಎಂದ ಅವರು, ಇಂದು ಮಾಧ್ಯಮಗಳು ವ್ಯಕ್ತಿಯ ಭೌತಿಕವಾಗಿ ಹರಣ ಮಾಡುವ ಬದಲು ಚಾರಿತ್ರ ಹರಣ ಮಾಡುತ್ತಿದೆ. ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಸ್ವಾಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ.ರಾಜಲಕ್ಷ್ಮೀ, ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಉಜ್ವಲ್ ಗ್ರೂಪ್‌ನ ಆಡಳಿತ ನಿರ್ದೇಶಕ ಅಜಯ್ ಪಿ.ಶೆಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ಹಿರಿಯ ಪತ್ರಕರ್ತ ಮಂಜುನಾಥ ಶೆಣೈ ಜನ್ನಾಡಿ ಅವರಿಗೆ ಪತ್ರಿಕಾ ದಿನದ ಗೌರವ ಸಲ್ಲಿಸಲಾಯಿತು. ನಿವೃತ್ತ ಉಪಸಂಪಾದಕ ಜಯಾನಂದ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಅರಾಡಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಅತಿಥಿಗಳ ಪರಿಚಯವನ್ನು ಸಂಘದ ಕಾರ್ಯದರ್ಶಿ ರಹೀಂ ಉಜಿರೆ, ಸನ್ಮಾನಿತರ ಪರಿಚಯವನ್ನು ಕುಂದಾಪುರ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಜಾಡಿ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರಭಾಕರ ಆಚಾರ್ಯ ಚಿತ್ತೂರು ಮಾಡಿದರು. ವಿದ್ಯಾರ್ಥಿಗಳ ಪಟ್ಟಿಯನ್ನು ಮೈಕಲ್ ರೋಡ್ರಿಗಸ್ ವಾಚಿಸಿದರು

                        

                          

                        

                          

 

Leave a Reply

Your email address will not be published. Required fields are marked *