ಉಡುಪಿ : ನಗರದ ಮಧ್ಯಭಾಗದಲ್ಲಿರುವ ಆಭರಣ ತಯಾರಿಕಾ ಘಟಕದಲ್ಲಿ ವಿಷ ಅನಿಲ ಸೋರಿಕೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಎದುರಾಗಿದೆ.
ನಗರದ ಆಭರಣ ತಯಾರಿಕಾ ಸಂಸ್ಥೆಯು ಚಿನ್ನಾಭರಣ ತಯಾರಿಸಲು ಹಾಗೂ ಹಳೆ ಚಿನ್ನ ಮತ್ತು ಚಿನ್ನದ ಬಿಲ್ಲೆಗಳನ್ನು ಕರಗಿಸುವಾಗ ಸಲ್ಫರ್ ಉಪಯೋಗಿಸುತ್ತಿದ್ದು ಇದರಿಂದ ಹೊರಸೂಸುವ ವಿಷಾನಿಲ ನಗರದೆಲ್ಲೆಡೆ ಹರಡಿದೆ. ಈ ಹೊಗೆಯು ಬಹಳ ವಿಷಕಾರಿಯಾಗಿದ್ದು ನಗರ ಮಧ್ಯಭಾಗದಲ್ಲಿ ಈ ರೀತಿ ಹರಡುತ್ತಿದ್ದರೂ ನಗರಸಭಾ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಹಗಲು ಹೊತ್ತಿನಲ್ಲಿಯೂ ಇದೇ ರೀತಿಯ ವಿಷಯುಕ್ತ ಹೊಗೆ ಬಿಡುತ್ತಿದ್ದು, ಆಭರಣ ತಯಾರಿಕಾ ಘಟಕದ ಬಳಿಯೇ ಪ್ರಾಥಮಿಕ ಸರಕಾರಿ ಶಾಲೆ ಇದ್ದು ಶಾಲಾ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.