Share this news

ಕಾರ್ಕಳ: ಕಾರ್ಕಳದ ಐತಿಹಾಸಿಕ ಹಾಗೂ ಕಾರಣೀಕ ಕ್ಷೇತ್ರವಾಗಿರುವ ಅತ್ತೂರು ಪರ್ಪಲೆಗಿರಿಯಲ್ಲಿ ಪುನರುತ್ಥಾನಗೊಂಡು ಬಾಲಾಲಯದಲ್ಲಿರುವ ಧರ್ಮದೈವಗಳಾದ ಕಲ್ಕುಡ, ಕಲ್ಲುರ್ಟಿ ಹಾಗೂ ತೂಕತ್ತೇರಿ ದೈವಸಾನಿಧ್ಯಗಳಿಗೆ ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿನ ಫೆ11ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಪರ್ಪಲೆಗಿರಿಯಲ್ಲಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಪರ್ಪಲೆಗಿರಿ ಪುನರುತ್ಥಾನ ಸಮಿತಿಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.
ಅವರು ಕಾರ್ಕಳದ ಹೊಟೇಲ್ ಪ್ರಕಾಶ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ಪರ್ಪಲೆಗಿರಿಯಲ್ಲಿ ನೆಲೆನಿಂತ ಶಕ್ತಿಗಳು ಕಾಲಾಂತರದಲ್ಲಿ ಕೆಲವೊಂದು ಮಾನವ ವಿಪ್ಲವಗಳಿಂದ ದೈವೀಶಕ್ತಿಗಳನ್ನು ಬಲವಂತವಾಗಿ ಭೂಗರ್ಭದಲ್ಲಿ ಹುದುಗಿಸಿ ಇಡಲಾಗಿರಬಹುದು,ಆದರೆ ಕಾಲಾಂತರದಲ್ಲಿ ಶಕ್ತಿಗಳು ಮತ್ತೆ ನೆಲೆಯಾಗುವ ಕಾಲ ಸನ್ನಿಹಿತವಾಗಿದೆ ಎಂದರು. ಪರ್ಪಲೆಗಿರಿಯ ಎತ್ತರದ ಬೆಟ್ಟದಲ್ಲಿ ದೈವೀಶಕ್ತಿಗಳಿಗೆ ಶಾಶ್ವತ ನೆಲೆ ಕಲ್ಪಿಸುವುದರ ಜತೆಗೆ ಗೌರೀಶಂಕರ ದೇವಸ್ಥಾನ ನಿರ್ಮಾಣದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಎಲ್ಲೂರು ಸೀಮೆಯ ಆಗಮ ಪಂಡಿತ ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ಪೌರೋಹಿತ್ಯದಲ್ಲಿ ಶಿಲಾನ್ಯಾಸ ವಿಧಿಯು ಶಾಸ್ತೊçÃಕ್ತವಾಗಿ ನೆರವೇರಲಿದ್ದು, ಶಿಲಾನ್ಯಾಸ ಸಮಾರಂಭದಲ್ಲಿ ಆನೆಗುಂದಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಸಭಾಕಾರ್ಯಕ್ರಮವನ್ನು ಹೇರಂಬ ಇಂಡಸ್ಟಿçÃಸ್ ಮಾಲಕ ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದು, ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಭಾಗದ ಆರೆಸ್ಸೆಸ್ ಸಂಘ ಚಾಲಕ ಡಾ.ನಾರಾಯಣ ಶೆಣೈ, ದಕ್ಷಿಣ ಕರ್ನಾಟಕ ಪ್ರಾಂತ ಸಂಚಾಲಕ ಕೇಶವಮೂರ್ತಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿ ಮುನಿಯಾಲು ಉದಯ ಶೆಟ್ಟಿ, ಉದ್ಯಮಿ ಬೋಳ ದಾಮೋದರ ಕಾಮತ್ ಸೇರಿದಂತೆ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ರವೀಂದ್ರ ಶೆಟ್ಟಿ ಹೇಳಿದರು.
ಪರ್ಪಲೆಯ ಕಾರಣೀಕ ಕ್ಷೇತ್ರದಲ್ಲಿ ಗೌರೀಶಂಕರ ದೇವಸ್ಥಾನ ಹಾಗೂ ದೈವಸ್ಥಾನ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳಿಗೆ ಒಟ್ಟು 15 ಕೋ.ರೂ ಅಂದಾಜು ಯೋಜನಾ ವೆಚ್ಚ ಹಾಕಿಕೊಳ್ಳಲಾಗಿದೆ. ದೈವಗಳಿಗೆ ಶಾಶ್ವತ ಸಾನಿಧ್ಯ ಪ್ರಾಪ್ತಿಯಾದ ಬಳಿಕ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಸಂಕಲ್ಪ ಮಾಡಲಾಗುವುದು ಎಂದು ರವೀಂದ್ರ ಶೆಟ್ಟಿ ಮಾಹಿತಿ ನೀಡಿದರು.
ಈ ಸುದ್ದಿಗೋಷ್ಟಿಯಲ್ಲಿ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ರಿ. ಅಧ್ಯಕ್ಷ ಪ್ರಶಾಂತ ನಾಯಕ್, ಪರ್ಪಲೆಗಿರಿ ಪುನರುತ್ಥಾನ ಸಮಿತಿಯ ಪ್ರದಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಕೋಶಾಧಿಕಾರಿ ನಿತ್ಯಾನಂದ ಪೈ ಉಪಸ್ಥಿತರಿದ್ದರು.
ಪರ್ಪಲೆಗಿರಿ ಪುನರುತ್ಥಾನ ಸಮಿತಿಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿ ನೇತೃತ್ವದಲ್ಲಿ ದೈವಸ್ಥಾನದ ನೂತನ ಗರ್ಭಗುಡಿ ನಿರ್ಮಾಣಗೊಳ್ಳುತ್ತಿದ್ದು, ಕಾರ್ಕಳ ಶಾಸಕ ಸುನಿಲ್ ಕುಮಾರ್, ಉದ್ಯಮಿ ಬೋಳ ಪ್ರಭಾಕರ ಕಾಮತ್, ನ್ಯಾಯವಾದಿ ಎಂ.ಕೆ ವಿಜಯಕುಮಾರ್, ನಿಟ್ಟೆ ವಿದ್ಯಾಸಂಸ್ಥೆಯ ವಿನಯ ಹೆಗ್ಡೆ ಸೇರಿದಂತೆ ಹಲವಾರು ಗಣ್ಯರು ಈ ಕ್ಷೇತ್ರದ ಜೀರ್ಣೋದ್ದಾರ ಕೈಂಕರ್ಯಕ್ಕೆ ಕಟಿಬದ್ದರಾಗಿ ಶ್ರಮಿಸುತ್ತಿದ್ದಾರೆ.

Leave a Reply

Your email address will not be published. Required fields are marked *