ನವದೆಹಲಿ: ಕೇಂದ್ರ ಸರ್ಕಾರ ದೇಶದ ಹೆಸರನ್ನು “ಇಂಡಿಯಾ” ಎಂಬುದರ ಬದಲಾಗಿ ಕೇವಲ “ಭಾರತ” ಎಂದು ಬದಲಾವಣೆ ಮಾಡಲು ಮುಂದಾಗಿದೆ ಎಂಬ ವರದಿಗಳೆಲ್ಲಾ ಕೇವಲ ವದಂತಿ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ. ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾದ, ಬಿಜೆಪಿಯಿಂದ ಸ್ವಾಗತಿಸಲ್ಪಟ್ಟ ವರದಿಯ ಕುರಿತು ಪ್ರತಿಕ್ರಿಯಿಸಿದ ಸಚಿವ ಅನುರಾಗ್ ಠಾಕೂರ್ ಭಾರತದ ರಾಷ್ಟ್ರಪತಿ ಎಂಬುದನ್ನು “ಪ್ರೆಸಿಡೆಂಟ್ ಆಫ್ ಭಾರತ್” ಎಂದು ಬರೆಯಲಾಗಿದೆ. ಅದರಲ್ಲಿ ತಪ್ಪೇನಿದೆ. ಈ ಮೊದಲು ಸಹ ಹಲವು ಆಮಂತ್ರಣ ಪತ್ರಿಕೆಗಳನ್ನು “ಭಾರತ ಸರ್ಕಾರ್” ಎಂಬ ಹೆಸರಿನಲ್ಲಿ ಕಳುಹಿಸಲಾಗಿದೆ. ಆಗೆಲ್ಲಾ ಎಲ್ಲಿ ಸಮಸ್ಯೆಯಾಗಿತ್ತು? ಎಂದು ಪ್ರಶ್ನಿಸಿದ್ದಾರೆ.
ಬಹಳಷ್ಟು ನ್ಯೂಸ್ ಚಾನಲ್ಗಳು ತಮ್ಮ ಹೆಸರಿನಲ್ಲಿ ಭಾರತ ಎಂಬುದನ್ನು ಅಳವಡಿಸಿಕೊಂಡಿವೆ. ಆದರೆ ಈ ಜನ ಮಾತ್ರ (ವಿಪಕ್ಷಗಳು) ಭಾರತ ಎಂಬ ಹೆಸರಿನೊಂದಿಗೆ ಅಲರ್ಜಿ ಹೊಂದಿದ್ದಾರೆ. ಈಗೀಗ ಕೆಲವರಿಗೆ ಭಾರತ ಎಂಬ ಹೆಸರು ನೋವುಂಟು ಮಾಡುತ್ತಿದೆ. ಇವರು ವಿದೇಶಿ ನೆಲದಲ್ಲಿ ನಿಂತು ಭಾರತಕ್ಕೆ ಅವಮಾನಿಸುತ್ತಿದ್ದಾರೆ. ಇದು ಭಾರತ ಎಂಬ ಹೆಸರನ್ನು ವಿರೋಧಿಸುತ್ತಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಜಿ20 ಆಮಂತ್ರಣ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ ಎಂದು ನಮೂದಿಸಿರುವುದರಿಂದ ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲಾಗುತ್ತದೆ ಎಂಬ ವದಂತಿಗಳು ಹಬ್ಬಿದ್ದವು. ಒಂದು ವೇಳೆ ಭಾರತ ಎಂದು ಹೆಸರು ಬದಲಾದರೆ ಇಂಡಿಯಾ ಹೆಸರನ್ನು ಹೊಂದಿರುವ ಸಂಸ್ಥೆಗಳು ಬದಲಾಗಲಿವೆ ಎಂದು ಹಲವರು ಪೋಸ್ಟ್ ಮಾಡಿದ್ದಾರೆ. ಇಸ್ರೋ ಹೆಸರು ಬಿಸ್ರೋ ಎಂದು ಬದಲಾಗಲಿದೆ. ಐಐಎಂ- ಬಿಐಎಂ ಎಂದು, ಐಐಟಿ- ಬಿಐಟಿ, ಎಐಐಎಂಎಸ್- ಎಬಿಐಎಂಸ್, ಆರ್ಬಿಐ- ಆರ್ಬಿಬಿ ಎಂದು ಬದಲಾಗಲಿದೆ ಎಂದು ಪೋಸ್ಟ್ಗಳನ್ನು ಮಾಡಲಾಗಿದೆ. ಅದೇ ರೀತಿ ಬಿಸಿಸಿಐ ಎಂಬುದು ಭಾರತ್ ಕಂಟ್ರೋಲಿAಗ್ ಕ್ರಿಕೆಟ್ ಇಂಟರ್ನ್ಯಾಷನಲ್ ಎಂದಾಗಲಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ.
ಜಿ20 ಶೃಂಗಸಭೆ ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಸಿದ್ಧಪಡಿಸಿರುವ ಆಮಂತ್ರಣ ಪತ್ರಿಕೆಯಲ್ಲಿ ಅವರ ಹುದ್ದೆಯನ್ನು ಪ್ರೆಸಿಡೆಂಟ್ ಆಫ್ ಭಾರತ್ (ಭಾರತದ ಅಧ್ಯಕ್ಷೆ) ಎಂದು ಬರೆಯಲಾಗಿದೆ. ಇದರಲ್ಲಿ ಈವರೆಗೆ ಬಳಸುತ್ತಿದ್ದ ಇಂಡಿಯಾ ಪದ ಕಾಣೆಯಾಗಿದೆ. ಅಲ್ಲದೆ, ಇಂಡಿಯಾ ಪದ ಅಳಿಸಿ ದೇಶದ ಹೆಸರನ್ನು ಭಾರತ ಎಂದು ಬದಲಿಸುವ ಯತ್ನದ ಭಾಗ ಇದು ಎಂಬ ಊಹಾಪೋಹ ಆರಂಭವಾಗಿದೆ. ಇದು ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.