ಬಾಲಸೋರ್: ಕಳೆದ ಶುಕ್ರವಾರ ನಡೆದ ಭೀಕರ ತ್ರಿವಳಿ ರೈಲು ದುರಂತದ ತನಿಖೆ ಹೊಣೆ ಹೊತ್ತಿರುವ ಸಿಬಿಐ ಸತತ 2 ದಿನ ತನಿಖೆ ನಡೆಸಿ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದೆ.
ಮಂಗಳವಾರ ಅಪಘಾತ ಸ್ಥಳಕ್ಕೆ ಎರಡು ಬಾರಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದ ಸಿಬಿಐ ಬುಧವಾರವು 45 ನಿಮಿಷಗಳ ಕಾಲ ಅಪಘಾತ ಸ್ಥಳದಲ್ಲೆ ತನಿಖೆ ನಡೆಸಿ ಪ್ರಮುಖ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಇದರಲ್ಲಿ ಲೂಪ್ ಲೇನ್ ಮೇನ್ ಲೈನ್, ಸಿಗ್ನಲ್, ಸ್ಟೇಷನ್ ಮಾಸ್ಟರ್ ಕೊಠಡಿ ಹಾಗೂ ನೌಕರರ ಕೊಠಡಿಗಳನ್ನು ಪರಿಶೀಲಿಸಿದ ತಂಡ ಅಪಘಾತ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ಅಧಿಕಾರಿಗಳು, ನೌಕರರ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದೆ. ಈ ಮೂಲಕ ಫೋನ್ ಕಾಲ್, ವಾಟ್ಸಪ್ ಮೆಸೇಜ್, ಸಾಮಾಜಿಕ ಜಾಲತಾಣದ ಬಳಕೆಯ ಪರಿಶೀಲನೆ ನಡೆಸಲಿದೆ.

278 ಮಂದಿಯ ಸಾವಿಗೆ ಕಾರಣವಾದ ಒಡಿಶಾದ ತ್ರಿವಳಿ ರೈಲು ದುರಂತ ಪ್ರಕರಣದ ತನಿಖೆಯನ್ನು ಸಿಬಿಐ ಮಂಗಳವಾರ ಆರಂಭಿಸಿದೆ. ಈ ಕುರಿತಾಗಿ ಸಿಬಿಐ ತನ್ನದೇ ಎಫ್ಐಆರ್ ದಾಖಲಿಸಿದ್ದು, ಬಳಿಕ ಸ್ಥಳಕ್ಕೆ ಭೇಟಿ ನೀಡಿದ ತನಿಖಾ ತಂಡ ದಾಖಲೆಗಳನ್ನು ಸಂಗ್ರಹಿಸಿದೆ. ಕೃತ್ಯದಲ್ಲಿ ಕ್ರಿಮಿನಲ್ ಸಂಚು ಏನಾದರೂನ ನಡೆದಿದೆಯೇ ಎಂಬುದನ್ನು ಸಿಬಿಐ ಪತ್ತೆ ಮಾಡಲಿದೆ.
ಈ ದುರಂತದ ಹಿಂದೆ ದುಷ್ಕೃತ್ಯದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ರೈಲ್ವೆ ಇಲಾಖೆ ಸಿಬಿಐಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬಾಹಾನಗ ರೈಲು ನಿಲ್ದಾಣದಕ್ಕೆ ಭೇಟಿ 10 ಮಂದಿ ಸಿಬಿಐ ಅಧಿಕಾರಿಗಳ ತಂಡ, ರೈಲು ಹಳಿಗಳು, ಸಿಗ್ನಲ್ ರೂಂಗಳನ್ನು ಪರಿಶೀಲನೆ ನಡೆಸಿದ್ದು, ರೈಲ್ವೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ. ಸಿಬಿಐ ಅಧಿಕಾರಿಗಳ ಜೊತೆ ವಿಧಿವಿಜ್ಞಾನ ಪ್ರಯೋಗಾಲಯದ ತಂಡವೂ ಸಹ ಬಾಲಸೋರ್ ತಲುಪಿದ್ದು, ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದೆ. ಈ ದುರಂತಕ್ಕೆ ಒಳಸಂಚು ಕಾರಣವಾಗಿರಬಹುದು ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿರುವ ಸಿಬಿಐ ಎಲ್ಲಾ ವಿಧಾನಗಳಲ್ಲೂ ತನಿಖೆ ನಡೆಸಲಿದೆ.


