ಕಾರ್ಕಳ: ಅಕ್ಕಿ, ಬೇಳೆ, ದವಸ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗಿದೆ. ರಾಜ್ಯದಲ್ಲಿ ಜನತೆ ಮೂಲಭೂತ ಬೇಡಿಕೆ ಈಡೇರಿಸಿಕೊಳ್ಳಲು ಹರಸಾಹಸ ಪಡುವಂತಹ ಸ್ಥಿತಿ ಬಂದೊದಗಿದೆ. ಅಗತ್ಯ ವಸ್ತು ಬೆಲೆ ಏರಿಕೆ, ವಿದ್ಯುತ್ ದರ ದುಪ್ಪಟ್ಟು, ಎಲ್ಲೆಂದರಲ್ಲಿ ಮದ್ಯದಂಗಡಿ ತೆರೆಯುವ ಮೂಲಕ ಸರಕಾರ ಸಮಾಜದ ಸ್ವಾಸ್ಥ್ಯ ಹಾಳುಗೆಡವಲು ಹೊರಟಿದೆ. ಕಾಂಗ್ರೆಸ್ ದುರಾಡಳಿತಕ್ಕೆ ಇದು ಸಾಕ್ಷಿಯಾಗಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವಾಣಿಜ್ಯ, ಕೈಗಾರಿಕೆಗಳಿಗೆ ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ. ಉತ್ಪಾದನಾ ಕ್ಷೇತ್ರಕ್ಕೆ ಇದು ದೊಡ್ಡ ಹೊಡೆತ. ಇದರಿಂದಾಗಿ ಉತ್ಪಾದನಾ ವೆಚ್ಚ ಅಧಿಕಗೊಂಡು ಅದರ ಹೊರೆ ನೇರವಾಗಿ ಗ್ರಾಹಕರಿಗೆ ತಟ್ಟಲಿದೆ. ಈ ಮೂಲಕ ಸಿದ್ದರಾಮಯ್ಯ ಸರಕಾರ ಜನಸಾಮಾನ್ಯರ ನೆಮ್ಮದಿಯ ಜೀವನಕ್ಕೆ ಎಳ್ಳು-ನೀರು ಬಿಟ್ಟಿದೆ. ಅಲ್ಲದೆ ರಾಜ್ಯ ಸರಕಾರ ಗ್ರಾಮಕ್ಕೊಂದರAತೆ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ವಿಪರ್ಯಾಸ. ಒಂದು ಕಡೆ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪ ತೊಡುವಾಗ ಇನ್ನೊಂದು ಕಡೆ ಆದಾಯ ಸಂಗ್ರಹಕ್ಕಾಗಿ ಗ್ರಾಮಮಟ್ಟದಲ್ಲಿ, ಸೂಪರ್ ಮಾರ್ಕೆಟ್ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟು ಸಮಾಜದ, ಕುಟುಂಬದ ಸ್ವಾಸ್ಥ್ಯ ಹಾಳುಗೆಡವಲು ಸರಕಾರ ಮುಂದಾಗಿದೆ. ಇಂತಹ ದಾರಿದ್ರ್ಯ ರಾಜ್ಯ ಸರಕಾರಕ್ಕೇ ಬೇಕೇ? ಯುವಜನತೆಯನ್ನು ಕುಡಿತದತ್ತ ಪ್ರೇರೇಪಿಸುವ ಸರಕಾರದ ನಡೆಯನ್ನು ಒಗ್ಗಟ್ಟಾಗಿ ವಿರೋಧಿಸಬೇಕು ಎಂದಿದ್ದಾರೆ.
ಭೂ ನೋಂದಣಿ ಶುಲ್ಕ ಶೇ. 30 ಏರಿಕೆ ಏರಿಕೆಯಾಗಿದೆ. ಜನತೆಗೆ ಬೇಕಾಬಿಟ್ಟಿ ಆಮಿಷವೊಡ್ಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈ ಗ್ಯಾರಂಟಿಗಳನ್ನು ಕೊಡಲು ಜನರಿಂದಲೇ ವ್ಯವಸ್ಥಿತವಾಗಿ ಹಣ ಸುಲಿಗೆ ಮಾಡುತ್ತಿದೆ. ಅಕ್ಟೋಬರ್ 1 ರಿಂದ ಜಾರಿಗೆ ಬಂದಿರುವ ಭೂ ನೋಂದಣಿ ಶುಲ್ಕ ಏರಿಕೆ ಸ್ವಂತಕ್ಕೊAದು ಸೂರು ಕಟ್ಟಿಕೊಳ್ಳುವ, ಒಂದಷ್ಟು ಜಮೀನು ಹೊಂದುವ ಬಡವರ ಕನಸಿಗೆ ಕೊಳ್ಳಿ ಇಟ್ಟಿದೆ. ಜನರನ್ನು ಕೊಳ್ಳೆ ಹೊಡೆದು ಅದರಿಂದಲೇ ಒಂದಿಷ್ಟು ಬಿಟ್ಟಿ ಭಾಗ್ಯಗಳನ್ನು ಕೊಡುವ ಈ ಸರಕಾರ ಬೇಕಾ ಎಂದು ಜನರು ಚಿಂತಿಸುವುದು ಅಗತ್ಯವಾಗಿದೆ ಎಂದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಏಕಪಕ್ಷೀಯ, ನಿರಂಕುಶ ಆದೇಶಗಳಿಂದಾಗಿ ಟ್ರಕ್, ಲಾರಿ ಮತ್ತಿತರ ಸರಕು ಸಾಗಾಟ ಮಾಡುವ ವಾಹನಗಳ ಚಾಲಕರು ಮತ್ತು ಮಾಲಕರು ಬೀದಿಗೆ ಬಂದಿದ್ದಾರೆ. ಕಟ್ಟಡ ನಿರ್ಮಾಣ ಸಾಗಿಸುವ ವಾಹನಗಳನ್ನು ಹಿಡಿದು ಕೇಸು ಜಡಿದು ದಂಡ ಹಾಕುವ ಪೊಲೀಸರ ಕ್ರಮವನ್ನು ಪ್ರತಿಭಟಿಸಿ ಚಾಲಕ ಮತ್ತು ಮಾಲಕರು ಮುಷ್ಕರ ಪ್ರಾರಂಭಿಸಿ 11 ದಿನವಾಯಿತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವೆ ಪರಿಹಾರ ಕಂಡುಕೊಳ್ಳುವುದು ಬಿಡಿ, ಕನಿಷ್ಠ ಉಡುಪಿಗೆ ಬಂದು ಮುಷ್ಕರ ನಿರತರ ಅಹವಾಲುಗಳನ್ನು ಆಲಿಸುವ ಔದಾರ್ಯವನ್ನೂ ತೋರಿಸಿಲ್ಲ. ಜನರ ಯಾವ ಬೇಡಿಕೆಗೂ ಈ ಸರಕಾರ ಸ್ಪಂದಿಸುತ್ತಿಲ್ಲ.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಬಿಟ್ಟಿ ಕೊಡುಗೆಗಳಿಂದಲೇ ಜನರನ್ನು ಖುಷಿಯಾಗಿಟ್ಟು ತಾವು ಅಧಿಕಾರ ಅನುಭವಿಸುತ್ತಾ ಸುಖವಾಗಿರಬಹುದು ಎಂದು ಮುಖ್ಯಮಂಮತ್ರಿಗಳು ಮತ್ತು ಇತರ ಮಂತ್ರಿಗಳು ಭಾವಿಸಿರುವಂತಿದೆ. ಬಜೆಟ್ನಲ್ಲಂತೂ ಯಾವುದೇ ಅಭಿವೃದ್ಧಿ ಯೋಜನೆಗಳು ಘೋಷಣೆಯಾಗಿಲ್ಲ. ಹಿಂದೆ ಜಾರಿಗೊಂಡ ಯೋಜನೆಗಳೂ ಅನುಷ್ಠಾನಗೊಳ್ಳದೇ ಬಾಕಿಯಾಗಿವೆ. ಸರಕಾರದ ಖಜಾನೆಯಲ್ಲಿ ಹಣ ಇಲ್ಲ, ಸದ್ಯ ಯಾರೂ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬೇಡಿಕೆಯೊಂದಿಗೆ ಬರಬೇಡಿ ಎಂದು ಸ್ವತಃ ಮುಖ್ಯಮಂತ್ರಿಯವರೇ ಶಾಸಕರಿಗೆ ಹೇಳಿದ್ದಾರೆ. ಹೀಗಾದರೆ ರಾಜ್ಯದ ಗತಿಯೇನು? ಎಂದು ಪ್ರಶ್ನಿಸಿದ್ದಾರೆ.
ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ ಎಂದು ಸಭೆಗಳಲ್ಲಿ ಹೇಳುವ ಮುಖ್ಯಮಂತ್ರಿಯವರು ಯಾವ ರೀತಿ ಒಂದೇ ಸಮುದಾಯದ ಓಲೈಕೆಯಲ್ಲಿ ತೊಡಗಿದ್ದಾರೆ ಎಂಬುದಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಹಲವು ಘಟನೆಗಳೇ ಸಾಕ್ಷಿ. ಶಿವಮೊಗ್ಗ ಗಲಭೆ, ಕೋಲಾರದ ಅತಿರೇಕದ ವರ್ತನೆಗಳೆಲ್ಲ ಸರಕಾರದ ಕುಮ್ಮಕ್ಕಿನಿಂದಲೇ ನಡೆದಿರುವುದು ಸ್ಪಷ್ಟ. ಇವುಗಳಿಗೆಲ್ಲ ನ್ಯಾಯ ಕೇಳಿದವರನ್ನೇ ಕೇಸು ಹಾಕಿ ಜೈಲಿಗೆ ಕಳುಹಿಸುವ ದಮನಕಾರಿ ನೀತಿಯನ್ನು ಸರಕಾರ ಅನುಸರಿಸುತ್ತಿದೆ. ಜನರ ನೆಮ್ಮದಿಯ ಜೀವನ ಕಸಿದಿರುವ ಕಾಂಗ್ರೆಸ್ ಸರಕಾರ ವಾಸ್ತವ ವಿಚಾರವನ್ನು ಅರಿತು ಬದುಕಲು ಬಿಡಬೇಕೆಂದು ಮಹಾವೀರ ಹೆಗ್ಡೆ ಸರಕಾರವನ್ನು ಆಗ್ರಹಿಸಿದ್ದಾರೆ.