ಮಂಗಳೂರು: ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಾರೆ ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿನಿಯರಿಬ್ಬರು ಶಿಕ್ಷಕರ ಕುಡಿಯುವ ನೀರಿನ ಬಾಟಲ್ ಗೆ ಅವಧಿ ಮೀರಿದ ಮಾತ್ರೆಗಳನ್ನು ಹಾಕಿದ ಪರಿಣಾಮ ಅದೇ ನೀರು ಕುಡಿದು ಓರ್ವ ಶಿಕ್ಷಕ ಹಾಗೂ ಶಿಕ್ಷಕಿ ಅಸ್ವಸ್ಥಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲದ ಶಾಲೆಯೊಂದರಲ್ಲಿ ಕಲಿಯುತ್ತಿರುವ 6ನೇ ತರಗತಿಯ ವಿದ್ಯಾರ್ಥಿನಿಯರು ಈ ಕೃತ್ಯ ಎಸಗಿದ್ದು ಸಿಸಿ ಕ್ಯಾಮರದಲ್ಲಿ ಬಯಲಾಗಿದೆ.ವಿದ್ಯಾರ್ಥಿನಿಯರಿಗೆ ಗಣಿತ ಶಿಕ್ಷಕಿ ಪರೀಕ್ಷೆಯಲ್ಲಿ ಉತ್ತರ ಸರಿಯಿದ್ದರೂ ಅಂಕ ಕೊಟ್ಟಿಲ್ಲ ಎನ್ನುವ ಕಾರಣ ನಾವು ಈ ಕೃತ್ಯ ಎಸಗಿರುವುದಾಗಿ ಹೇಳಿಕೆ ನೀಡಿದ್ದಾರೆ.
ಗಣಿತ ಶಿಕ್ಷಕಿ ಜೊತೆಗೆ ಮತ್ತೊಬ್ಬ ಶಿಕ್ಷಕಿಯೂ ನೀರು ಕುಡಿದ ಪರಿಣಾಮ ಓರ್ವ ಶಿಕ್ಷಕಿ ಅಸ್ವಸ್ಥಗೊಂಡರೆ,ಇನ್ನೋರ್ವ ಶಿಕ್ಷಕಿಯ ಮುಖದಲ್ಲಿ ಊತ ಕಾಣಿಸಿಕೊಂಡಿದೆ. ನೀರಿನ ರುಚಿಯಲ್ಲಿ ಬದಲಾವಣೆ ಕಂಡು ಬಂದು ಸೂಕ್ಷ್ಮವಾಗಿ ಗಮನಿಸಿದಾಗ ನೀರಲ್ಲಿ ಮಾತ್ರೆಗಳಇರುವುದು ಕಂಡು ಬಂದಿದೆ.ಈ ಕುರಿತು ಶಾಲೆಯಲ್ಲಿನ ಸಿಸಿಟಿವಿ ವೀಡಿಯೋ ಗಮನಿಸಿದಾಗ, ವಿದ್ಯಾರ್ಥಿನಿಯರ ಕೃತ್ಯ ಬೆಳಕಿಗೆ ಬಂದಿದೆ.
ಈ ಘಟನೆಯ ಬಳಿಕ ಶಾಲಾಭಿವೃದ್ದಿ ಸಮಿತಿಯು ವಿದ್ಯಾರ್ಥಿನಿಯರಿಬ್ಬರಿಗೆ ಟಿಸಿ ನೀಡಲು ನಿರ್ಧರಿಸಿದೆ.












