Share this news

ಕಾರ್ಕಳ:ಧಾರ್ಮಿಕ ಕೇಂದ್ರಗಳು ಭಕ್ತರ ಆಸ್ತಿಯೇ ಹೊರತು ರಾಜಕೀಯ ಪಕ್ಷಗಳ ಆಸ್ತಿಯಲ್ಲ.ಸಮಸ್ತ ಭಕ್ತರ ಸಹಕಾರದಿಂದ ದೇಗುಲ ನಿರ್ಮಾಣವಾಗಿದೆ, ಆದರೆ ಕಾರ್ಕಳ ಶಾಸಕರು ತಮ್ಮ ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಕ್ಷೇತ್ರವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಕಾರ್ಕಳ ಕಾಂಗ್ರೆಸ್ ನಗರ ಪ್ರಚಾರ ಸಮಿತಿ ಅಧ್ಯಕ್ಷ ಶುಭದ್ ರಾವ್ ಆರೋಪಿಸಿದ್ದಾರೆ.


ಅವರು ಶುಕ್ರವಾರ ಕಾರ್ಕಳ ಹೊಟೇಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಾರ್ಕಳ ಮಾರಿಗುಡಿಯ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವವು ದೇವಿಯ ಇಚ್ಚೆಯಂತೆ ಭಕ್ತಾಭಿಮಾನಿಗಳು ಹಾಗೂ ದಾನಿಗಳ ಸಹಕಾರದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಆದರೆ ಶಾಸಕರು ಹಾಗೂ ತಮ್ಮ ಹಿಂಬಾಲಕರು ದೇವಳದ ಜೀರ್ಣೋದ್ಧಾರಕ್ಕೆ ನಾವೇ ಕಾರಣ ಎನ್ನುತ್ತಿದ್ದಾರೆ ಎಂದು ಶುಭದ್ ರಾವ್ ಆರೋಪಿಸಿದ್ದಾರೆ.


ಅಲ್ಲದೇ ಅವರು ಈ ಕುರಿತು ಶಾಸಕರಲ್ಲಿ ಸ್ಪಷ್ಟನೆ ಕೋರಿ 10 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

1.ಕಾರ್ಕಳ ಮಾರಿಗುಡಿ ಜೀರ್ಣೋದ್ದಾರಕ್ಕೆ ನಿಮ್ಮ ಸರಕಾರದಿಂದ ಬಂದಿರುವ ಅನುದಾನ ಎಷ್ಟು? ತಾವು ಮತ್ತು ಮುಜರಾಯಿ ಸಚಿವರು ಭಾಷಣದಲ್ಲಿ ಹೇಳಿದ ಅನುದಾನ ಬಿಡುಗಡೆಯಾಗಿದೆಯೇ ?

2.ರಾಜ್ಯದಲ್ಲಿ ನಿಮ್ಮದೇ ಸರಕಾರವಿದ್ದು ದೇವಸ್ಥಾನಕ್ಕೆ ಬೇಕಾಗಿರುವ ಕೋಟ್ಯಾಂತರ ರೂಪಾಯಿಯ ಮರಗಳನ್ನು
ಅರಣ್ಯ ಇಲಾಖೆಯಿಂದ ಪಡೆಯುವ ಅವಕಾಶವಿದ್ದರೂ‌ ಪಡೆಯದೆ ನಿಮ್ಮ ‌ಮಿತ್ರನ ಮರದ ಮಿಲ್ಲಿನಿಂದಲೇ ಪಡೆಯಲು ಕಾರಣ ಏನು ?

3.ಅನುವಂಶಿಕ ಹಿರಿಯ ಆಡಳಿತ ಮೊಕ್ತೇಸರರನ್ನು ಪೂಜೆಗೆ ಕುಳ್ಳಿರಿಸದಿರಲು ಕಾರಣವೇನು?
4.ಉದ್ದೇಶಿತ ಮಾರಿಯಮ್ಮ ಸಭಾಭವನದ ಜಾಗವನ್ನು ಕಾನೂನು ಬಾಹಿರವಾಗಿ 99 ವರ್ಷಕ್ಕೆ ಲೀಸ್ ಆಧಾರದಲ್ಲಿ ನೀಡಲು ಕಾರಣವೇನು?

5.ಮುಜುರಾಯಿ ಇಲಾಖೆಯ ಗಮನಕ್ಕೆ ತಾರದೆ ಅವರ ಅನುಮತಿಯೂ ಇಲ್ಲದೆ ತೆಗೆದ ಜೀರ್ಣೋದ್ಧಾರ ಹುಂಡಿಯ ಹಣದ ಲೆಕ್ಕವನ್ನು ನೀಡದಿರಲು ಕಾರಣವೇನು?

6.ಬ್ರಹ್ಮಕಲಶೋತ್ಸವದ ನಂತರ ನಡೆಯುವ ದೃಢಕಲಶ ಕಾರ್ಯಕ್ರಮಕ್ಕೆ ಹಗಲು ರಾತ್ರಿ ದುಡಿದ ಕಾರ್ಯಕರ್ತರನ್ನು ಆಹ್ವಾನಿಸದೇ ನಿರ್ಲಕ್ಷಿಸಲು ಕಾರಣ ಏನು ?

7.ಮಾರಿಗುಡಿಯ ಹೊರ ಆವರಣದಲ್ಲಿದ್ದ ಅಂಗಡಿಗಳನ್ನು ಕೆಡಹಿ‌ ಅವರನ್ನು ಬೀದಿ ಪಾಲು ಮಾಡಿದ್ದೀರಿ. ಆವರಿಗೆ ಇನ್ನೂ ಪರ್ಯಾಯ ವ್ಯವಸ್ಥೆ ಕಲ್ಪಿಸದಿರಲು ಕಾರಣವೇನು?

8.ಪೆರ್ವಾಜೆ ಮಹಾಲಿಂಗೇಶ್ವರ ದೇವಳದ ಜಾಗದಲ್ಲಿ ತಾವು ಮತ್ತು ‌ತಮ್ಮ ಹಿಂಬಾಲಕರು ಭೂ-ವ್ಯವಹಾರ ನಡೆಸುತ್ತಿರುವುದು ಸುಳ್ಳೆ ?

9.ಪಡುತಿರುಪತಿ ವೆಂಕಟರಮಣ ದೇವಳದ ರಥಬೀದಿಯ ಒಳಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಗೊತ್ತಿದ್ದರೂ ಕೋಟ್ಯಂತರ ರೂ ಬಿಲ್ಲು ಪಾವತಿಸಿದ್ದು ಯಾಕೆ ?

10.ಪರಶುರಾಮ ಥೀಂ-ಪಾರ್ಕಿನಲ್ಲಿ ತುಳುನಾಡಿನ ನಂಬಿಕೆಯ ದೈವ ದೇವರನ್ನು
ಅವಮಾನಿಸಿರುವ ಹಿಂದೆ ನಿಮ್ಮ ಉದ್ದೇಶವೇನು? ಸತ್ಯಾಸತ್ಯತೆ ತಿಳಿದ ಬಳಿಕವೂ ಅದನ್ನು ಸರಿಪಡಿಸದೇ
ಮೌನವಾಗಿರಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ ‌.ಈ ಸಂದರ್ಭದಲ್ಲಿ ಮುಖಂಡರಾದ ಸುರೇಂದ್ರ ಶೆಟ್ಟಿ, ಸದಾಶಿವ ದೇವಾಡಿಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *